ದಿಗಂತ ವರದಿ ಶಿರಸಿ:
ಮಾಜಿ ಸ್ಪೀಕರ್, ಬಿಜೆಪಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಾಲೂಕಿನ ಕುಳವೆ ಜನತಾ ವಿದ್ಯಾಲಯದ ಮತಗಟ್ಟೆ 127ರಲ್ಲಿ ಮಂಗಳವಾರ ಮತದಾನ ಮಾಡಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪತ್ನಿ ಭಾರತಿ ಹೆಗಡೆ, ಮಕ್ಕಳಾದ ಜಯಲಕ್ಷ್ಮೀ, ರಾಜಲಕ್ಷೀ, ಶ್ರೀಲಕ್ಷ್ಮೀ ಮತದಾನ ಮಾಡಿದರು. ಪ್ರಥಮ ಬಾರಿಗೆ ಕಾಗೇರಿ ಪುತ್ರಿ ಶ್ರೀಲಕ್ಷ್ಮೀ ಮತದಾನ ಮಾಡಿದರು.
ಮತದಾನದ ಬಳಿಕ ಮಾತನಾಡಿದ ಕಾಗೇರಿ, ಕಾಂಗ್ರೆಸ್ ಪಕ್ಷ ಸೋಲಿನ ಭೀತಿಯಿಂದ ಹತಾಶೆಯಾಗಿ ಕಾನೂನು ಬಾಹಿರವಾಗಿ ಕಾರ್ಯ ಮಾಡುತ್ತಿದೆ. ಈಗಾಗಲೇ ಹಣ ಹಂಚಿರುವ ವಿಡಿಯೋ ವೈರಲ್ ಆಗಿದೆ. ಮತದಾರರು ಬಿಜೆಪಿ ಪರ ಮತ ಚಲಾಯಿಸಿ ಆಶೀರ್ವಾದ ಮಾಡಲಿದ್ದಾರೆ ಎನ್ನುವ ನಂಬಿಕೆ ಇದೆ. ಬಹಳ ದೊಡ್ಡ ಉತ್ಸವ, ಮತದಾನ ಒಂದು ಹಬ್ಬ ಇದ್ದಂತೆ. ಈ ಕ್ಷೇತ್ರದಲ್ಲಿ ಬಿಜೆಪಿ ದಾಖಲೆಯ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸವಿದೆ.
ಈ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ ಎಂದರು. ನಾಗರಾಜ ಶೆಟ್ಟಿ, ವಿನಯ ಭಟ್ಟ, ರಂಜಿತಾ ಹೆಗಡೆ, ಶ್ರೀನಾಥ ಶೆಟ್ಟಿ, ಕಾಗೇರಿ ಗಣಪತಿ ಶೇಟ್, ನಾಗರಾಜ ಹೆಗಡೆ, ಸಂದೇಶ ಭಟ್ಟ ಇದ್ದರು.