ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲಾ ಪ್ರಾಣ ಪ್ರತಿಷ್ಠಾಪನೆ ದಿನವೇ ನಾಸಿಕ್ನ ಕಲಾರಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಉದ್ಧವ್ ಠಾಕ್ರೆ ಆಹ್ವಾನ ನೀಡಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಉದ್ಧವ್ ಠಾಕ್ರೆ ರನ್ನು ಆಹ್ವಾನಿಸಿಲ್ಲ. ಈ ಹಿನ್ನೆಲೆ ಮಹಾರಾಷ್ಟ್ರದ ನಾಸಿಕ್ನ ಕಲಾರಾಮ್ ದೇವಸ್ಥಾನದಲ್ಲಿ ಆರತಿ ಮಾಡಲಿದ್ದಾರೆ. ಮುರ್ಮು ಅವರನ್ನು ಜನಸಂದಣಿಯಲ್ಲಿ ಒಬ್ಬರಂತೆ ಪರಿಗಣಿಸಲಾಗುವುದಿಲ್ಲ. ಈ ಹಿನ್ನೆಲೆ ಕಲಾರಾಮ್ ದೇವಸ್ಥಾನಕ್ಕೆ ಬರುವಂತೆ ಆಹ್ವಾನ ನೀಡಿ ಉದ್ಧವ್ ಹಿಂದಿಯಲ್ಲಿ ಪತ್ರ ಬರೆದಿದ್ದಾರೆ.
ಬಾಂದ್ರಾ ನಿವಾಸವಾದ ಮಾತೋಶ್ರೀಯಲ್ಲಿ ಮಾತನಾಡಿದ ಉದ್ಧವ್, ವಂಶಾಡಳಿತ ರಾಜಕಾರಣದಿಂದ ದೇಶವು ಸಂಕಷ್ಟಕ್ಕೆ ಸಿಲುಕಿದೆ ಎಂಬ ಹೇಳಿಕೆಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೂ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಾಗೂ ಪುತ್ರ ಶ್ರೀಕಾಂತ್ ಶಿಂಧೆ ರನ್ನು ಉಲ್ಲೇಖಿಸಿ ಟಾಂಗ್ ನೀಡಿದ್ದಾರೆ.
ಉದ್ಧವ್ ಠಾಕ್ರೆ ನಾಸಿಕ್ನ ಗೋದಾವರಿ ದಡದಲ್ಲಿ ‘ಮಹಾ ಆರತಿ’ ಮಾಡುವುದಾಗಿ ಘೋಷಿಸಿದ್ದಾರೆ ಮತ್ತು ಭಗವಾನ್ ರಾಮನು ತನ್ನ ವನವಾಸದ ಸಮಯದಲ್ಲಿ ವಾಸಿಸುತ್ತಿದ್ದನೆಂದು ಹೇಳಲಾದ ಪಂಚವಟಿಯಲ್ಲಿರುವ ಕಲಾರಾಮ್ ದೇವಾಲಯಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ.
ರಾಮ ಮಂದಿರಕ್ಕಾಗಿ ನಡೆದ ಸುದೀರ್ಘ ಹೋರಾಟಕ್ಕೆ ಸುಪ್ರೀಂಕೋರ್ಟ್ ಅಂತಿಮವಾಗಿ ನ್ಯಾಯ ನೀಡುವುದರೊಂದಿಗೆ ಕೊನೆಗೊಂಡಿತು. ಪ್ರಾಣ ಪ್ರತಿಷ್ಠಾಪನೆಯು ದೇಶದ ಅಸ್ಮಿತೆಯ ಪ್ರಶ್ನೆಯಾಗಿದೆ. ಈ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಮತ್ತು ಅವರೇ ಲೋಕಾರ್ಪಣೆ ಮಾಡಬೇಕು.ಆದರೆ ಕೇಂದ್ರ ಸರ್ಕಾರ ಅವರಿಗೆ ಆಹ್ವಾನ ನೀಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಾವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸುತ್ತಿದ್ದೇವೆ. ನಾನು ಕಟ್ಟಾ ಹಿಂದೂ. ಲಕ್ಷಾಂತರ ಭಕ್ತರೊಂದಿಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಹೋಗಲು ಬಯಸುತ್ತೇನೆ. ರಾಮ ಮಂದಿರ ವಿಚಾರದಲ್ಲಿ ಶಿವಸೇನೆಯ ಪಾತ್ರ ಮತ್ತು ಬಾಳಾಸಾಹೇಬ್ ಠಾಕ್ರೆ ತೆಗೆದುಕೊಂಡ ನಿಲುವು ಜನರಿಗೆ ತಿಳಿದಿದೆ ಎಂದೂ ಉದ್ಧವ್ ಠಾಕ್ರೆ ಹೇಳಿಕೊಂಡರು.