ಹೊಸ ದಿಗಂತ ವರದಿ, ವಿಜಯಪುರ:
ಯುದ್ಧಗ್ರಸ್ತ ಉಕ್ರೇನ್ ನಲ್ಲಿ ನಗರದ ಇನ್ನೊಬ್ಬ ಎಂಬಿಬಿಎಸ್ ವಿದ್ಯಾರ್ಥಿನಿ ರಕ್ಷಾ ಶಿವಾಜಿ ಕಂಬಾಗಿ ಎನ್ನುವರು ಸಿಲುಕಿದ್ದು, ಪಾಲಕರು ಆತಂಕಗೊಂಡಿದ್ದಾರೆ.
ರಕ್ಷಾ ಕಳೆದ 3 ತಿಂಗಳಿನಿಂದ ಉಕ್ರೇನ್ ನಲ್ಲಿ ಇದ್ದು, ಎಂಬಿಬಿಎಸ್ ಮೊದಲ ಸೆಮ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇಲ್ಲಿನ ಸಾಯಿಪಾರ್ಕ್ ನಿವಾಸಿ ಶಿವಾಜಿ ಕಂಬಾಗಿ, ಶೋಭಾ ಕಂಬಾಗಿ ದಂಪತಿಗೆ ಮೂರು ಜನ ಮಕ್ಕಳಿದ್ದು, ರಕ್ಷಾ ದ್ವಿತೀಯ ಪುತ್ರಿಯಾಗಿದ್ದಾಳೆ. ಹಿರಿಯ ಪುತ್ರ ರಾಮಕುಮಾರ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಕಿರಿಯ ಪುತ್ರ ಆನಂದ 8 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.
ಶಿವಾಜಿ ಕಂಬಾಗಿ ಖಾಸಗಿ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದು, ತಮ್ಮ ಮಗಳನ್ನು ಸುರಕ್ಷತೆಯಿಂದ ಕರೆ ತರುವಂತೆ ಸರ್ಕಾರಕ್ಕೆ ಪಾಲಕರು ಮೊರೆಯಿಟ್ಟಿದ್ದಾರೆ.