ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ 100 ದಿನಗಳ ಒಳಗಾಗಿ ಎತ್ತಿನಹೊಳೆ ಮೊದಲ ಹಂತದ ಯೋಜನೆಯಲ್ಲಿ (Yethinahole project) ನೀರು ಪಂಪ್ ಮಾಡಿ ಹರಿಸಲಾಗುವುದು ಎಂದು ಡಿಸಿಎಂ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರದ ಹೆಬ್ಬನಹಳ್ಳಿ ಪವರ್ ಸಬ್ ಸ್ಟೇಷನ್ ಮತ್ತು ದೊಡ್ಡನಾಗರ ಪಂಪ್ ಹೌಸ್ಗೆ ಮಂಗಳವಾರ ಭೇಟಿ ನೀಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟದಲ್ಲಿ ಹರಿಯುವ ನೀರಲ್ಲಿ ಕೋಲಾರದವರೆಗೆ ಒಟ್ಟು 24 ಟಿಎಂಸಿ ಹರಿಸುವುದು ಎತ್ತಿನಹೊಳೆ ಯೋಜನೆಯ ಉದ್ದೇಶ. ಈ ಹಿಂದೆ ಜಲ ಸಂಪನ್ಮೂಲ ಸಚಿವನಾಗಿದ್ದಾಗಲೂ ನಾನು ಇಲ್ಲಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದೆ. ಕೆಲಸ ಆಗ ಎಲ್ಲಿತ್ತೋ ಈಗಲೂ ಅಲ್ಲೇ ಇದೆ. ಈ ಯೋಜನೆ ವೆಚ್ಚ ಸದ್ಯಕ್ಕೆ 24 ಸಾವಿರ ಕೋಟಿ ರೂಗೆ ಏರಿಕೆ ಆಗಿದ್ದು, ಈ ಯೋಜನೆ ಪ್ರಗತಿ ಬಗ್ಗೆ ನನಗೆ ಸಮಾಧಾನ ಇಲ್ಲ. ಹೀಗಾಗಿ ನಾನೇ ಖುದ್ದಾಗಿ ಬಂದು ಪರಿಶೀಲನೆ ಮಾಡಿದ್ದೇನೆ ಎಂದು ಹೇಳಿದರು.
ಯೋಜನೆಗೆ ಎದುರಾಗಿರುವ ಸಮಸ್ಯೆಗಳಿಗೆ ಒಂದೊಂದಾಗಿ ಪರಿಹಾರ ನೀಡಲಾಗಿದೆ. ವಿದ್ಯುತ್ ಇಲಾಖೆ ಸಮಸ್ಯೆ, ಅರಣ್ಯ ಇಲಾಖೆ ಸಮಸ್ಯೆ, ಭೂ ಮಾಲೀಕರ ಸಮಸ್ಯೆ ಸೇರಿದಂತೆ ಎಲ್ಲದ್ದಕ್ಕೂ ಪರಿಹಾರ ಸೂಚಿಸಲಾಗಿದೆ.100 ದಿನಗಳಲ್ಲಿ ಮೊದಲ ಹಂತದ ಯೋಜನೆಯ ನೀರನ್ನು ಪಂಪ್ ಮಾಡಲು ಕಾಲ ಮಿತಿ ನಿಗದಿ ಮಾಡಿದ್ದೇವೆ ಎಂದರು.