ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಕುಸಿತ ಮತ್ತು ಪ್ರವಾಹಕ್ಕೆ ಒಳಗಾಗಿರುವ ವಯನಾಡಿಗೆ ಇಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ.
ವಯನಾಡಿನ ಪ್ರವಾಹಪೀಡಿತ ಸಂತ್ರಸ್ತರನ್ನು ಭೇಟಿಯಾದ ರಾಹುಲ್ ನನ್ನ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೀಡಾದಾಗ ಅನುಭವಿಸಿದ ಸಂಕಟಕ್ಕಿಂತ ಹೆಚ್ಚಿನ ದುಃಖವನ್ನು ವಯನಾಡು ಜನರು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
‘ನನ್ನ ತಂದೆ ತೀರಿಕೊಂಡಾಗ ಅನುಭವಿಸಿದ್ದ ಸಂಕಟ ಈಗ ಅನುಭವಕ್ಕೆ ಬರುತ್ತಿದೆ. ಇಲ್ಲಿನ ಜನರು ತಮ್ಮ ತಂದೆಯನ್ನು ಮಾತ್ರ ಕಳೆದುಕೊಂಡಿಲ್ಲ, ಕುಟುಂಬದ ಸಹೋದರರು, ಸಹೋದರಿಯರು, ತಾಯಿ ಮತ್ತು ತಂದೆಯನ್ನು ಕಳೆದುಕೊಂಡಿದ್ದಾರೆ. ಇದರಿಂದ ಅವರು ಅನುಭವಿಸುತ್ತಿರುವ ದುಃಖ, ನಾನು ಅನುಭವಿಸಿದ್ದಕ್ಕಿಂತಲೂ ತೀವ್ರವಾಗಿರುತ್ತದೆ. ಕುಟುಂಬದ ಹಲವು ಸದಸ್ಯರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರುವ ಜನರನ್ನು ಮಾತನಾಡಿಸಲು ಕಷ್ಟವಾಗುತ್ತಿದೆ ಎಂದು ಹೇಳಿದರು.
ರಾಜಕೀಯ ವಿಷಯಗಳನ್ನು ಚರ್ಚಿಸಲು ಇದು ಸಮಯ ಅಥವಾ ಸ್ಥಳ ಎಂದು ನಾನು ಭಾವಿಸುವುದಿಲ್ಲ. ಇಲ್ಲಿನ ಜನರಿಗೆ ಸಹಾಯದ ಅಗತ್ಯವಿದೆ. ನನಗೆ ಈ ಕ್ಷಣದಲ್ಲಿ ರಾಜಕೀಯದಲ್ಲಿ ಆಸಕ್ತಿ ಇಲ್ಲ. ನನ್ನ ಗಮನ ವಯನಾಡಿನ ಜನರ ಮೇಲೆ ಎಂದು ರಾಹುಲ್ ಗಾಂಧಿ ಹೇಳಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ನನ್ನ ಸಹೋದರ ರಾಹುಲ್ ಅನುಭವಿಸುತ್ತಿರುವ ಅದೇ ಸಂಕಟ ನನಗೂ ಆಗುತ್ತಿದೆ ಎಂದು ಸಂಕಟ ವ್ಯಕ್ತಪಡಿಸಿದರು.
‘ಈ ಕಷ್ಟದ ಸಮಯದಲ್ಲಿ ಪ್ರಿಯಾಂಕಾ ಮತ್ತು ನಾನು ವಯನಾಡ್ ಜನರೊಂದಿಗೆ ನಿಂತಿದ್ದೇವೆ. ನಾವು ಪರಿಹಾರ, ರಕ್ಷಣೆ ಮತ್ತು ಪುನರ್ವಸತಿ ಪ್ರಯತ್ನಗಳನ್ನು ನಿಕಟವಾಗಿ ಗಮನಿಸುತ್ತಿದ್ದೇವೆ, ಅಗತ್ಯವಿರುವ ಎಲ್ಲಾ ನೆರವು ಒದಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಯುಡಿಎಫ್ ಬದ್ಧವಾಗಿದೆ. ಪುನರಾವರ್ತಿತ ಘಟನೆಗಳು ಭೂಕುಸಿತಗಳು ಮತ್ತು ನೈಸರ್ಗಿಕ ವಿಕೋಪಗಳ ಬಗ್ಗೆ ಸಮಗ್ರ ಕ್ರಿಯಾ ಯೋಜನೆ ತುರ್ತಾಗಿ ಅಗತ್ಯವಿದೆ’ ಎಂದು ಎಕ್ಸ್ನಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.