ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ವಾಯು ಮಾಲಿನ್ಯಕ್ಕೆ (Air Pollution) ಕಾರಣವಾಗುವ ಮೂಲಗಳು ನಿರ್ದಿಷ್ಟ ಪ್ರಮಾಣ ತಿಳಿಯದೇ ಮಾಲಿನ್ಯವನ್ನು ಕಡಿಮೆ ಮಾಡುವ ನೀತಿಯನ್ನು ರಚಿಸಲು ಸಾಧ್ಯವಿಲ್ಲ ಎಂದು ದೆಹಲಿ ಸಚಿವೆ ಅತಿಶಿ (Minister Atishi) ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ದೆಹಲಿ ಸಚಿವ ಸಂಪುಟ ರಾಷ್ಟ್ರ ರಾಜಧಾನಿಯಲ್ಲಿ ನೈಜ-ಸಮಯದ ವಾಯು ಮಾಲಿನ್ಯ ಮೂಲ ಅಧ್ಯಯನವನ್ನು ನಡೆಸಲು ಐಐಟಿ-ಕಾನ್ಪುರ್ ಜೊತೆಗೆ ಎಂಒಯುಗೆ ಸಹಿ ಹಾಕಿತು. ಯೋಜನೆಗೆ ಅಂದಾಜು ವೆಚ್ಚ 12 ಕೋಟಿ ರೂ.ಗಿಂತ ಹೆಚ್ಚಿದ್ದು, ದೆಹಲಿ ಸರ್ಕಾರವು ಐಐಟಿ-ಕಾನ್ಪುರಕ್ಕೆ ಅಗತ್ಯ ಉಪಕರಣಗಳನ್ನು ಖರೀದಿಸಲು ಮತ್ತು ಡೇಟಾ ಸಂಗ್ರಹಣೆಗಾಗಿ ಕೇಂದ್ರೀಕೃತ ಸೂಪರ್ಸೈಟ್ ಅನ್ನು ಸ್ಥಾಪಿಸಲು 10 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದರು. ಇದೀಗ ಸಚಿವೆ ಅತಿಶಿ ಅವರು ದೆಹಲಿಯ ಮಾಲಿನ್ಯಕ್ಕೆ ಯಾವ ಮೂಲಗಳು ಕಾರಣ ಎಂಬುದನ್ನು ತೋರಿಸಲು ಡೇಟಾ ಇಲ್ಲ ಎಂದು ಹೇಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 3 ವರ್ಷಗಳ ಹಿಂದೆ ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಬಿಡುಗಡೆ ಮಾಡಿದ ದತ್ತಾಂಶವನ್ನು ಉಲ್ಲೇಖಿಸಿದ್ದ ಅತಿಶಿ ದೆಹಲಿ ಮಾಲಿನ್ಯವು ಹರಿಯಾಣ ಮತ್ತು ಪಂಜಾಬ್ನಲ್ಲಿ (Punjab) ಹುಲ್ಲು ಸುಡುವಿಕೆಯೊಂದಿಗೆ ನೇರವಾಗಿ ಸಂಬಂಧ ಹೊಂದಿದೆ ಎಂದರು.
ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳ ವಿರುದ್ಧ ಸ್ವಯಂಪ್ರೇರಿತ ನಿರ್ಲಕ್ಷ್ಯದ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವಂತೆ ಅವರು ವಾಯು ಗುಣಮಟ್ಟ ಆಯೋಗಕ್ಕೆ ಮನವಿ ಮಾಡಿದರು. 2 ರಾಜ್ಯಗಳಲ್ಲಿ ಹುಲ್ಲು ಸುಡುವುದರಿಂದ ದೆಹಲಿಯಲ್ಲಿ ಅಸಹನೀಯ ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದು ತಿಳಿಸಿದರು.
ಅಂದು ಕಾಂಗ್ರೆಸ್ನಿಂದ ಅಮರಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿಯಾಗಿದ್ದರು ಮತ್ತು ಬಿಜೆಪಿಯಿಂದ ಮನೋಹರ್ ಲಾಲ್ ಖಟ್ಟರ್ ಹರಿಯಾಣದ ಸಿಎಂ ಆಗಿದ್ದರು. ಈಗ ಪಂಜಾಬ್ನಲ್ಲಿ ಆಪ್ ಸರ್ಕಾರ ರಚನೆ ಮಾಡಿದ್ದು ಭಗವಂತ್ ಮಾನ್ (Bhagwant Man Singh) ಮುಖ್ಯಮಂತ್ರಿಯಾಗಿದ್ದಾರೆ. ಈ ಹಿನ್ನಲೆ ಮಾಲಿನ್ಯದ ಹೊರೆಯನ್ನು ಪಂಜಾಬ್ ಮೇಲೆ ಹೊರಿಸಲು ಆಪ್ ಹಿಂದೇಟು ಹಾಕುತ್ತಿದೆ ಎಂದು ಹೇಳಿದರು.