ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಹೇಳಿಕೆಗಳನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಳ್ಳಿಹಾಕಿದ್ದು, ಇಸ್ಲಾಮಾಬಾದ್ನಿಂದ ಬರುವ ಹೇಳಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಅವರು ಬಯಸುವುದಿಲ್ಲ ಎಂದು ಹೇಳಿದ್ದಾರೆ.
“ಪಾಕಿಸ್ತಾನವು ಮೊದಲು ಘಟನೆಯನ್ನು ನಿರಾಕರಿಸಿ ನಂತರ ಭಾರತದ ಮೇಲೆ ಆರೋಪ ಹೊರಿಸುತ್ತಿದೆ, ಅವರ ಹೇಳಿಕೆಗಳಿಗೆ ನಾನು ಹೆಚ್ಚಿನ ಪ್ರಾಮುಖ್ಯತೆ ನೀಡಲು ಬಯಸುವುದಿಲ್ಲ. ಏನೇ ನಡೆದರೂ ಅದು ದುರದೃಷ್ಟಕರ, ಮತ್ತು ಅದು ಸಂಭವಿಸಬಾರದಿತ್ತು” ಎಂದು ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ದಾಳಿಯ ಕುರಿತು ತಟಸ್ಥ, ಪಾರದರ್ಶಕ ಮತ್ತು ವಿಶ್ವಾಸಾರ್ಹ ತನಿಖೆಯಲ್ಲಿ ಭಾಗವಹಿಸಲು ಇಸ್ಲಾಮಾಬಾದ್ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಕಾಕುಲ್ನಲ್ಲಿರುವ ಪಾಕಿಸ್ತಾನ ಮಿಲಿಟರಿ ಅಕಾಡೆಮಿಯಲ್ಲಿ ಪಾಸಿಂಗ್-ಔಟ್ ಪೆರೇಡ್ ಅನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಶೆಹಬಾಜ್, “ಜವಾಬ್ದಾರಿಯುತ ದೇಶವಾಗಿ ತನ್ನ ಪಾತ್ರವನ್ನು ಮುಂದುವರೆಸುತ್ತಾ, ಯಾವುದೇ ತಟಸ್ಥ, ಪಾರದರ್ಶಕ ಮತ್ತು ವಿಶ್ವಾಸಾರ್ಹ ತನಿಖೆಯಲ್ಲಿ ಭಾಗವಹಿಸಲು ಪಾಕಿಸ್ತಾನ ಮುಕ್ತವಾಗಿದೆ.” ಎಂದು ಹೇಳಿದ್ದಾರೆ.