ಹೊಸದಿಗಂತ ವರದಿ ಬಾಗಲಕೋಟೆ:
ಮಾಜಿ ಸಿಎಂ ಸಿದ್ದರಾಮಯ್ಯ ಕೆರೂರ ಘರ್ಷಣೆಯಲ್ಲಿ ಗಾಯಗೊಂಡು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಸ್ಲಿಂ ಯುವಕರ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಗಾಯಾಳುಗಳಿಗೆ ನೀಡಿದ ಪರಿಹಾರ ಹಣವನ್ನು ಮುಸ್ಲಿಂ ಮಹಿಳೆಯರೊಬ್ಬರು ವಾಪಸ್ ಸಿದ್ದರಾಮಯ್ಯಗೆ ಎಸೆದ ಘಟನೆ ಇಂದು ಬಾಗಲಕೋಟೆಯಲ್ಲಿ ನಡೆದಿದೆ. ಜುಲೈ 6 ರಂದು ಕೆರೂರ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ, ಚಾಕು ಇರಿತದಲ್ಲಿ ಗಾಯಗೊಂಡಿದ್ದ ಮುಸ್ಲಿಂ ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಸ್ಲಿಂ ಯುವಕರ ಆರೋಗ್ಯ ವಿಚಾರಿಸಿ, ತಲಾ 50 ಸಾವಿರ ರೂಪಾಯಿಗಳಂತೆ 2 ಲಕ್ಷ ರೂಪಾಯಿಯನ್ನು ಸಿದ್ದರಾಮಯ್ಯ ಪರಿಹಾರ ನೀಡಿದರು. ಕೂಡಲೇ ಅವರ ಹಿಂದೆಯೇ ತೆರಳಿದ ಮುಸ್ಲಿಂ ಮಹಿಳೆ ನಮಗೆ ದುಡ್ಡು ಬೇಡ, ನಾವು ಕಷ್ಟಪಟ್ಟು ಕೆಲಸ ಮಾಡಿ ಜೀವನ ನಡೆಸುತ್ತೇವೆ, ನಮಗೆ ಶಾಂತಿ ಬೇಕು, ನ್ಯಾಯ ಬೇಕು ಎಂದು ಹಣವನ್ನು ಕಾರಿನತ್ತ ಬಿಸಾಕಿದರು.