ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರ ಸಮಸ್ಯೆ ಬಗ್ಗೆ ಮಾತುಕತೆಯ ಮೂಲಕ ಪರಿಹಾರದ ಜೊತೆಗೆ ಭಾರತದೊಂದಿಗೆ ಶಾಶ್ವತ ಶಾಂತಿಯನ್ನು ಬಯಸುತ್ತೇವೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪ್ರತಿನಿಧಿಗಳ ಗುಂಪಿನೊಂದಿಗೆ ಶನಿವಾರ ಮಾತನಾಡಿದ ಅವರು, ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಗುಣವಾಗಿ ಪರಿಹರಿಸಬೇಕು. ಕಾಶ್ಮೀರ ಸಮಸ್ಯೆಗೆ ಯುದ್ಧ ಎಂದಿಗೂ ಪರಿಹಾರವಲ್ಲ. ಸೌಹಾರ್ದಯುತ ಮಾತುಕತೆಯಿಂದ ಮಾತ್ರ ಸಮಸ್ಯೆಗಳ ಪರಿಹಾರ ಸಾಧ್ಯ ಎಂದರು.
ಬ್ರಿಟೀಷರಿಂದ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಶ್ಮೀರದ ಸಮಸ್ಯೆ ಉಭಯ ದೇಶಗಳ ನಡುವೆ ಜಿದ್ದಾಜಿದ್ದಿನಿಂದ ಕೂಡಿತ್ತು. ಆದರೆ, ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಿಂದ ಮತ್ತು ನೇರವಾಗಿ ಪಾಕಿಸ್ತಾನದಿಂದ ಆಗಾಗ ಒಳನುಸುಳುವಿಕೆ ಪ್ರಯತ್ನಗಳು ಮತ್ತು ದಾಳಿಗಳು ನಡೆಯುತ್ತಲೇ ಇರುತ್ತವೆ.
ಭಯೋತ್ಪಾದನೆಯನ್ನು ಕೊನೆಗಾಣಿಸಿದರೆ ಮಾತುಕತೆಗೆ ಸಿದ್ಧ ಎಂದು ಭಾರತ ಯಾವಾಗಲೂ ಹೇಳಿದೆ. ಆದರೆ ಪಾಕಿಸ್ತಾನ ಅದಕ್ಕೆ ಒಪ್ಪದೆ, ವಿಶ್ವಸಂಸ್ಥೆಯ ಒಪ್ಪಂದಗಳ ನೆಪದಲ್ಲಿ ಮಾತುಕತೆಗೆ ಒತ್ತಾಯಿಸುತ್ತಿದೆ.