ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರ್ತೇವೆ: ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದ್ದು ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಡಾ.ಕೆ.ಸುಧಾಕರ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಸೇರಿದಂತೆ ರಾಜ್ಯದ ಹಲವು ಬಿಜೆಪಿ ಮುಖಂಡರು ಭಾಗಿಯಾಗಿದ್ದಾರೆ.‌

ಈ ವೇಳೆ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿಯವರು “ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ್ದಕ್ಕೆ ಎಲ್ಲರಿಗೂ ಅಭಿನಂದನರ ತಿಳಿಸುತ್ತೇನೆ. ಹೀಗೇ ದಾಖಲೆಯ ಸಂಖ್ಯೆಯಲ್ಲಿ ಸೇರುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಸಂದೇಶ ರವಾನಿಸಲಾಗಿದೆ. ನಿಮ್ಮ ವಿಶ್ವಾಸಕ್ಕೆ ನಾವು ದ್ರೋಹ ಮಾಡುವುದಿಲ್ಲ” ಎಂದಿದ್ದಾರೆ.

2019ರಲ್ಲಿ ಬಿಎಸ್‌ ಯಡಿಯೂರಪಪ್‌ ಸಿಎಂ ಆಗಬೇಕಿತ್ತು. ಆದರೆ ಕಾಂಗ್ರೆಸ್‌ ನವರ ಹುನ್ನಾರದಿಂದ ಅದು ಕೈ ತಪ್ಪಿತು. ನಾವು ಸಮರ್ಥವಾಗಿ ಕೊವಿಡ್​ ಎದುರಿಸಿದ್ದೇವೆ. ಜನರಿಗೆ ಉಚಿತವಾಗಿ ಕೊವಿಡ್​ ಲಸಿಕೆ ನೀಡಿದ್ದೇವೆ. ಕಾಂಗ್ರೆಸ್‌​​ನವರು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾರೆ. ಅನ್ನಭಾಗ್ಯ ಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳ್ತಾರೆ. ಚೀಲದಲ್ಲಿದ್ದ ಅಕ್ಕಿ ಮೋದಿಯವರದು, ಚೀಲ ಮಾತ್ರ ನಿಮ್ಮದು. ಅನ್ನಭಾಗ್ಯದಲ್ಲಿ ಅವ್ಯವಹಾರ ಆಯ್ತು. ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ದಂಧೆ ಮಾಡಿದ್ರಿ. ಲ್ಯಾಪ್​ಟಾಪ್​ ಕೊಡುವುದರಲ್ಲಿ ಹಗರಣ ಮಾಡಿದ್ರಿ ಎಂದು ಸಿದ್ಧರಾಮಯ್ಯನವರ ವಿರುದ್ಧ ಬೊಮ್ಮಾಯಿ ಹರಿ ಹಾಯ್ದಿದ್ದಾರೆ.

ಸರ್ಕಾರಕ್ಕೆ ಪರ್ಸೆಂಟೇಜ್​ ಸರ್ಕಾರ ಎಂದು ಹೇಳುತ್ತೀರಿ. ನೀವು ಕೆಲಸ ಮಾಡದೇ ಬರೀ ಬಿಲ್​ ಪಡೆದ್ದೀರಿ. ನಿಮ್ಮದು 100% ಕಮಿಷನ್​ ಸರ್ಕಾರ. ಬೋರ್‌ವೆಲ್‌ ಕೊರೆಸುವುದಕ್ಕೆ ಅನುಮತಿ ನೀಡಿ ಅದರಲ್ಲೂ ಅವ್ಯವಹಾರ ಮಾಡಿದಿರಿ, ಎಸ್‌ಸಿ ಹಾಗೂ ಎಸ್‌ಟಿ ಹಾಸಿಗೆ ದಿಂಬು ಕೊಡುವುದರಲ್ಲೂ ಸ್ಕ್ಯಾಮ್ ಮಾಡಿದ್ರಿ. ನಿಮ್ಮ ನಾಟಕ ನಡೆಯುವುದಿಲ್ಲ, ಇದನ್ನ ಕೊನೆಗಾಣಿಸಬೇಕು. ಎಂದು ಹೇಳಿದ್ದಾರೆ.

ಪ್ರವೀಣ್‌ ನೆಟ್ಟಾರ್‌ ಕುಟುಂಬಕ್ಕೆ ಉದ್ಯೋಗ ಭರವಸೆ
ಈ ವೇಳೆ ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್‌ ನೆಟ್ಟಾರ್‌ ಅವರ ಕುಟುಂಬಕ್ಕೆ ಉದ್ಯೋಗ ನೀಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಬಿಜೆಪಿಗೆ ಕಾರ್ಯಕರ್ತರೆಂದರೆ ಜೀವಾಳ. ಪ್ರಾಣಬಿಟ್ಟ ಪಕ್ಷದ ಕಾರ್ಯಕರ್ತನ ಕುಟುಂಬಕ್ಕೆ ತಮ್ಮ ಕಚೇರಿಯಲ್ಲಿಯೇ ಕೆಲಸ ಕೊಡಿಸುವುದಾಗಿ ಬೊಮ್ಮಾಯಿ ಘೋಷಿಸಿದ್ದಾರೆ.

ಸಚಿವ ಕೆ.ಸುಧಾಕರ್‌ ಮಾತು:

ಈ ವೇಳೆ ಮಾತಾಡಿದ ಸಚಿವ ಕೆ.ಸುಧಾಕರ್‌ ನಮ್ಮ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಡೋಕೆ ಬಂದಿದ್ದೇವೆ. ಬಿಜೆಪಿ, ಬೊಮ್ಮಾಯಿ ಸರ್ಕಾರದ ಸಾಧನೆ ನಿಮ್ಮ ಮುಂದೆ ಇಡುತ್ತಿದ್ದೇವೆ. ನಮ್ಮ ರೈತಾಪಿ ಜನರ, ಮಕ್ಕಳ ಸಬಲೀಕರಣ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ. ಶಿಕ್ಷಣದಿಂದ ಮಾತ್ರ ಮಕ್ಕಳ ಸಬಲೀಕರಣ ಸಾಧ್ಯ. 10 ಲಕ್ಷ ರೈತ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಆರಂಭಿಸಿದ್ದೇವೆ. ಈ ಮೂಲಕ ರೈತ ಮಕ್ಕಳ ಸಬಲೀಕರಣಕ್ಕೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ ಎಂದರು.

ವಿದ್ಯಾನಿಧಿ, ಲಸಿಕಾ ಉತ್ಸವ ಮಾಡಿದ್ದೇವೆ. 10 ಕೋಟಿ ಗೋಶಾಲೆ ಆರಂಭಿಸಿದ್ದೇವೆ. ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಉಚಿತವಾಗಿ ನೀಡಿದ್ದೇವೆ. ಮನೆ ಇಲ್ಲದಿರುವವರಿಗೆ 3 ಕೋಟಿ ಮನೆಗಳನ್ನು ಪ್ರಧಾನ ಮಂತ್ರಿ ಆವಾಜ್ ಯೋಜನೆಯ ಮೂಲಕ ನೀಡಿದ್ದೇವೆ. ಜನರ ಹಬ್ಬವೇ ಪ್ರಜಾಪ್ರಭುತ್ವ. 6.5 ಲಕ್ಷ ಕೋಟಿ ಎಫ್‍ಡಿಎ ಹೂಡಿಕೆಯಲ್ಲಿ 38% ರಾಜ್ಯಕ್ಕೆ ಬಂದಿದೆ. ಸರ್ಕಾರದ ಆಡಳಿತದ ಮೇಲೆ ವಿಶ್ವಾಸ ಇರಬೇಕಾಗುತ್ತೆ. ವಿಶ್ವಾಸ ಅರ್ಹತೆಯನ್ನು ನಮ್ಮ ಇಂದಿನ ಸರ್ಕಾರ ಹೊಂದಿದೆ. ಈ ಭಾಗದ ಜನರಿಗೆ ಸಹಕಾರವಾಗುವ ಎತ್ತಿನ ಹೊಳೆ ಪ್ರಮುಖ ಯೋಜನೆಯನ್ನು ಅನುಷ್ಠಾನ ಮಾಡುತ್ತೇವೆ.

ಇನ್ನು ಸಿದ್ಧರಾಮಯ್ಯ ಹಾಗೂ ಡಿಕೆಶಿಯವರಿಗೆ ಟಾಂಗ್‌ ನೀಡಿದ ಅವರು “ಡಬಲ್ ಎಂಜಿನ್ ಸರ್ಕಾರ ಬೇಕಾ? ಡಬಲ್ ಸ್ಟೇರಿಂಗ್ ಇರುವ ಸರ್ಕಾರ ಬೇಕಾ? ಡಬಲ್ ಸ್ಟೇರಿಂಗ್ ಡಬಲ್ ಡೋರ್ ಸರ್ಕಾರ ಆಗುತ್ತೆ. ಯಾರನ್ನು ಯಾವ ಬಾಗಿಲಿನಿಂದ ಇಳಿಸಬೇಕು ಎಂದು ನೋಡ್ತಿದ್ದಾರೆ” ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!