ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾ (INDIA bloc) ಮೈತ್ರಿಕೂಟದ ವಿರುದ್ಧ ಮತ್ತೊಮ್ಮೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಿಡಿದೆದ್ದಿದ್ದಾರೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಬ್ಯಾನರ್ಜಿ ಕಾಂಗ್ರೆಸ್ ಮುಂದೆ ಹೊಸ ಹೊಸ ಡಿಮ್ಯಾಂಡ್ ಇಟ್ಟಿದ್ದು, ಕಾಂಗ್ರೆಸ್ ಪಕ್ಷ ಟಿಎಂಸಿ ಜತೆ ಯಾವುದೇ ಮೈತ್ರಿಯನ್ನು ಬಯಸುವುದಾದರೆ ಅವರು ಸಿಪಿಎಂನಿಂದ ದೂರವಾಗಬೇಕು .ಅದೇ ರೀತಿ ಸೀಟು ಹಂಚಿಕೆ ಮಾತುಕತೆಯ ಸಂದರ್ಭ ತೃಣಮೂಲದ ಎರಡು ಸ್ಥಾನಗಳ ಪ್ರಸ್ತಾಪವನ್ನು ಕಾಂಗ್ರೆಸ್ ತಿರಸ್ಕರಿಸಿದೆ.ನಾವು ಅವರಿಗೆ ಒಂದೇ ಒಂದು ಸೀಟು ಕೂಡಾ ಕೊಡುವುದಿಲ್ಲ ಎಂದಿದ್ದಾರೆ .
ಸಿಪಿಎಂ ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದೆ. ನನ್ನನ್ನು ನಿರ್ದಯವಾಗಿ ಥಳಿಸಲಾಯಿತು. ನನ್ನ ಹಿತೈಷಿಗಳ ಆಶೀರ್ವಾದದಿಂದ ಮಾತ್ರ ನಾನು ಬದುಕಿದ್ದೇನೆ. ನಾನು ಎಂದಿಗೂ ಎಡಪಕ್ಷಗಳನ್ನು ಕ್ಷಮಿಸಲಾರೆ, ಸಿಪಿಎಂ ಪಕ್ಷವನ್ನು ಕ್ಷಮಿಸುವುದಿಲ್ಲ . ಹಾಗಾಗಿ ಇಂದು ಸಿಪಿಎಂ ಜೊತೆ ಇರುವವರು ಬಿಜೆಪಿಯಲ್ಲೂ ಇರಬಹುದು. ನಾನು ಅವರನ್ನು ಕ್ಷಮಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನಿಮಗೆ ವಿಧಾನಸಭೆಯಲ್ಲಿ ಒಬ್ಬನೇ ಒಬ್ಬ ಎಂಎಲ್ಎ ಇಲ್ಲ ಎಂದು ನಾನು ಕಾಂಗ್ರೆಸ್ಗೆ ಹೇಳಿದ್ದೇನೆ, ನಾವು ನಿಮಗೆ ಎರಡು ಸಂಸದೀಯ ಸ್ಥಾನಗಳನ್ನು ನೀಡುತ್ತೇವೆ. ನಿಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಆದರೆ ಅವರಿಗೆ ಹೆಚ್ಚಿನ ಸ್ಥಾನಗಳು ಬೇಕು. ನೀವು ಎಡಪಕ್ಷಗಳ ಸಹವಾಸವನ್ನು ತೊರೆಯುವವರೆಗೆ ನಾನು ನಿಮಗೆ ಒಂದೇ ಒಂದು ಸ್ಥಾನವನ್ನು ನೀಡುವುದಿಲ್ಲ ಎಂದು ಟಿಎಂಸಿ ನಾಯಕಿ ಹೇಳಿದ್ದಾರೆ.
ಸಿಪಿಎಂ ಈ ಹಿಂದೆ ತೃಣಮೂಲ ಜತೆಗಿನ ಮೈತ್ರಿಯನ್ನು ತಳ್ಳಿಹಾಕಿತ್ತು. ಜೂನ್ನಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಮಮತಾ ಬ್ಯಾನರ್ಜಿ ಮತ್ತು ಸಿಪಿಎಂ ಕೈ ಜೋಡಿಸುವುದಿಲ್ಲ, ಬಿಜೆಪಿ ಮತ್ತು ಟಿಎಂಸಿ ವಿರುದ್ಧ ಹೋರಾಡಲು ಬಂಗಾಳದಲ್ಲಿ ಎಡ ಮತ್ತು ಕಾಂಗ್ರೆಸ್ ಜೊತೆಗೆ ಜಾತ್ಯತೀತ ಪಕ್ಷಗಳು ಇರುತ್ತವೆ ಎಂದಿದ್ದಾರೆ.
ಒಂದು ವಾರದ ಹಿಂದೆ ತೃಣಮೂಲ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆ ನಡೆದಿದ್ದು ತಮ್ಮ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಚುನಾವಣೆಯ ನಂತರ ಮೈತ್ರಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದ್ದರು.