ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಬ್ಬಿ ಸಮುದ್ರದಲ್ಲಿ ಮಂಗಳೂರು ಬಂದರಿಗೆ ತೆರಳುತ್ತಿದ್ದಾಗ ವಾಣಿಜ್ಯ ನೌಕೆ ಎಂವಿ ಕೆಮ್ ಪ್ಲೂಟೋ ಮೇಲೆ ದಾಳಿ ನಡೆಸಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.
ಸರ್ಕಾರವು ಸಮುದ್ರದಲ್ಲಿ ನಡೆದ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಕಣ್ಗಾವಲು ಹೆಚ್ಚಿಸಿದೆ. ಸಮುದ್ರದ ಆಳದಿಂದಲೂ ಈ ದಾಳಿ ನಡೆಸಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದೂ ರಕ್ಷಣಾ ಸಚಿವರು ಹೇಳಿದ್ದಾರೆ.
ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ MV Chem Pluto ಎಂಬ ಸರಕು ಸಾಗಣೆ ನೌಕೆಯು ನವ ಮಂಗಳೂರು ಬಂದರಿಗೆ ತೆರಳುತ್ತಿದ್ದಾಗ ಅರಬ್ಬೀ ಸಮುದ್ರದ ಭಾರತದ ಪಶ್ಚಿಮ ಕರಾವಳಿಯಲ್ಲಿ ಡ್ರೋನ್ನಿಂದ ಹೂತಿ ಉಗ್ರಗಾಮಿಗಳು ನಡೆಸಿದ ಡ್ರೋನ್ ದಾಳಿಗೆ ಗುರಿಯಾಗಿದೆ ಎಂದು ವರದಿಯಾಗಿತ್ತು.
ಜಪಾನ್ ಒಡೆತನದ ಮತ್ತು ನೆದರ್ಲ್ಯಾಂಡ್ಸ್ ನಿರ್ವಹಿಸುತ್ತಿರುವ ಲೈಬೀರಿಯನ್ ಧ್ವಜದ ಅಡಿಯಲ್ಲಿದ್ದ ರಾಸಾಯನಿಕ ಟ್ಯಾಂಕರ್ ಡಿಸೆಂಬರ್ 23 ರಂದು ಭಾರತೀಯ ಕರಾವಳಿಯಿಂದ ಸುಮಾರು 200 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಡ್ರೋನ್ ದಾಳಿಗೊಳಗಾಗಿತ್ತು. ಇದು ಸೌದಿ ಅರೇಬಿಯಾದ ಅಲ್ ಜುಬೈಲ್ ಬಂದರಿನಿಂದ ನವಮಂಗಳೂರು ಬಂದರಿಗೆ ಕಚ್ಚಾ ತೈಲವನ್ನು ಸಾಗಿಸುತ್ತಿತ್ತು.