ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ದತ್ತಾತ್ರೇಯ ಜಯಂತಿ ಆಚರಣೆ

 ಹೊಸದಿಗಂತ ವರದಿ, ಮೈಸೂರು:

ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶ್ರೀ ಅವಧೂತ ದತ್ತಪೀಠ,ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಂಗಳವಾರ ಶ್ರೀ ದತ್ತಾತ್ರೇಯ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಯವರು ಮೊದಲು ಗೋವುಗಳಿಗೆ ಹಣ್ಣು ತಿನ್ನಿಸಿ, ಪೂಜೆ ಮಾಡಿ ನಂತರ ಶ್ರೀ ಚಕ್ರ ಪೂಜೆ ನೆರವೇರಿಸಿದರು.
ದೇಶ ವಿದೇಶಗಳಿಂದ ಬಂದಿದ್ದ ನೂರಾರು ಭಕ್ತಾರಿಂದ ಶ್ರೀ ದತ್ತಾತ್ರೇಯ ಸ್ವಾಮಿಗೆ ಸಹಸ್ರ ಕಲಶ ತೈಲಾಭಿಷೇಕವನ್ನು ನೆರವೇರಿಸಲಾಯಿತು.ಈ ವೇಳೆ ಕೊಚ್ಚಿ ಆಶ್ರಮ ಭಜನಾ ತಂಡದವರಿoದ ನಾಮ ಸಂಕೀರ್ತನ ನಡೆಯಿತು.

ಕಾರ್ಯಕ್ರಮದ ವೇಳೆ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ, ಇಂದು ಅತ್ಯಂತ ಪವಿತ್ರವಾದ ದಿನ. ಕಾಮ,ಕ್ರೋಧ ಲೋಭ, ಮತ್ಸರ ಎಲ್ಲವನ್ನು ಬಿಟ್ಟು ದತ್ತ ಉಪಾಸನೆ ಮಾಡಬೇಕು ಎಂದು ಹೇಳಿದರು.

ಈ ಶರೀರ ನಶ್ವರ, ದತ್ತನ ಉಪದೇಶ ಏನೆಂದರೆ ನಾವು ಸುಖ ಅನುಭವಿಸಿದಂತೆಯೇ ಅದರ ಹಿಂದೆ ದುಃಖವೂ ಇರುತ್ತದೆ. ಹಾಗಾಗಿ ಎಲ್ಲ ಇಂದ್ರಿಯಗಳನ್ನು ನಿಗ್ರಹ ಮಾಡಬೇಕು. ಸುಖ, ಲೋಭ,ಆಸೆಯೇ ದುಃಖಕ್ಕೆ ಮೂಲ. ಸುಖ ಮಾತ್ರ ಬೇಕು ಅಂದುಕೊಳ್ಳಬಾರದು ಸುಖ ದುಃಖ ಎರಡನ್ನು ಸಮಾನವಾಗಿ ಅನುಭವಿಸಬೇಕು ಎಂದು ಹೇಳಿದರು.

ಬರಿ ಸುಖವನ್ನಷ್ಟೇ ಅಪೇಕ್ಷೆ ಪಡಬಾರದು, ಧರ್ಮ ರಹಸ್ಯ ತಿಳಿದು ಕೊಂಡಾಗ ಸುಖ, ದುಃಖ,ನೋವು ಎಲ್ಲವನ್ನು ಸಮಾನವಾಗಿ ತೆಗೆದುಕೊಳ್ಳಬಹುದು, ಜೊತೆಗೆ ಸದಾ ದತ್ತಸ್ಮರಣೆ ಮಾಡಿದರೆ ಎಲ್ಲವೂ ಒಳಿತೇ ಆಗಲಿದೆ ತಿಳಿಸಿದರು.

ದತ್ತನೇ ವಿಷ್ಣು, ದತ್ತನೆ ಶಿವನು, ದತ್ತನೆ ಜ್ಞಾನ, ದತ್ತ ಕೂಡ ಶಕ್ತಿಯಲ್ಲಿ ಲೀನವಾಗಿದ್ದಾನೆ. ಶ್ರೀ ಚಕ್ರ ಪೂಜೆ ಮಾಡಿದರೆ ದತ್ತನನ್ನೇ ಪೂಜೆ ಮಾಡಿದಂತೆ ಇವೆರಡು ಒಂದೇ ಎಂಬುದನ್ನು ತಿಳಿದುಕೊಳ್ಳಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮರಾಠಿ ಭಾಷೆಯ ದತ್ತ ದರ್ಶನಂ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.

ಈ ವೇಳೆ ಶ್ರೀ ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!