ಹೊಸದಿಗಂತ ಡಿಜಿಟಲ್ ಡೆಸ್ಕ್:
ವನ್ಯಜೀವಿಗಳ ಚರ್ಮ, ಉಗುರು ಧರಿಸುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಹುಲಿ ಉಗುರಿನ ಲಾಕೆಟ್ ಸೇರಿದಂತೆ ವನ್ಯಜೀವಿ ಉತ್ಪನ್ನಗಳ ಅಕ್ರಮ ದಾಸ್ತಾನಿನ ವಿಚಾರಗಳ ಕುರಿತು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಬಳಿಕ ವಿಕಾಸಸೌಧದಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ವ, ನ್ಯಜೀವಿಗಳ ಚರ್ಮ, ಉಗುರು ಧರಿಸುವುದು ಕಾನೂನು ಉಲ್ಲಂಘನೆಯಾಗಿದೆ. 1972ರ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯಡಿ ಉಲ್ಲಂಘನೆ ಆಗುತ್ತದೆ. ಹುಲಿ ಉಗುರು ಧರಿಸಿದವರ ವಿರುದ್ಧ ಈವರೆಗೆ 8 ದೂರು ಬಂದಿದೆ ಎಂದು ಹೇಳಿದ್ದಾರೆ.
ವನ್ಯಜೀವಿಗಳ ಚರ್ಮ ಉಗುರು ಬಳಕೆ ಮಾಡುವುದು ನಿಷೇಧವಿದೆ. ಈ ಬಗ್ಗೆ ಕಾನೂನಿನ ಜ್ಞಾನದ ಅರಿವು ಇರುವುದಿಲ್ಲ ಹೀಗಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದರು.
ದರ್ಶನ್ ಇರಬಹುದು ಬೇರೆ ಯಾರೇ ಇರಬಹುದು. ದೂರುಗಳ ಬಂದಾಗ ಅದರ ಬಗ್ಗೆ ನ್ಯಾಯ ಸಮ್ಮತವಾಗಿ ತನಿಖೆ ನಡೆಯುತ್ತದೆ. ಒಂದೇ ಮಾನದಂಡದಲ್ಲಿ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ. ಕಾನೂನು ಎಲ್ಲರಿಗೂ ಒಂದೇ. ಆದಷ್ಟು ಬೇಗ ಎಫ್ಎಸ್ಎಲ್ ವರದಿ ಕೊಡಬೇಕು ಎಂದು ಒತ್ತಾಯ ಮಾಡ್ತೀನಿ. ನಕಲಿನೂ ಹಾಕಿಕೊಳ್ಳಬಾರದು, ಅದನ್ನು ಹಾಕಿಕೊಂಡ್ರೆ ಬೇರೆಯವರಿಗೆ ಪ್ರಚೋದನೆ ಮಾಡಿದಂತೆ ಆಗುತ್ತೆ. ಪ್ರಾಣಿಗಳ ಹತ್ಯೆಯ ಪ್ರಯತ್ನ ಗಳು ಆಗ್ತವೆ. ನಕಲಿ ಸಹಿತ ಈ ರೀತಿಯ ಪೆಂಡೆಂಟ್ ಹಾಕಿಕೊಳ್ಳಬಾರದೆಂದು ಮನವಿ ಮಾಡ್ತೀನಿ. ನಕಲಿ ಹಾಕಿಕೊಂಡವರ ವಿರುದ್ಧ ಕ್ರಮದ ಬಗ್ಗೆ ಕಾಯಿದೆಯಲ್ಲಿ ಇಲ್ಲ. ಆದರೆ ನಕಲಿ ಪೆಂಡೆಂಟ್ ಗಳನ್ನು ಯಾರೂ ಹಾಕಿಕೊಳ್ಳಬಾರದೆಂದು ಮನವಿ ಮಾಡುತ್ತೇನೆ ಎಂದರು.