ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನೈರುತ್ಯ ಮುಂಗಾರು ಕೊಂಚ ಕ್ಷೀಣಿಸಿದ್ದು, ಇದರ ಪರಿಣಾಮವಾಗಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಬಿಸಿಲು, ಮೋಡ ಜತೆಗೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದೇ ಪರಿಸ್ಥಿತಿ ಸೆಪ್ಟೆಂಬರ್ 5-6ರವರೆಗೂ ಮುಂದುವರಿಯಬಹುದು ಎಂದೂ ಇಲಾಖೆ ಹೇಳಿದೆ.
ಇನ್ನು ಬಾಂಗ್ಲಾದೇಶ ಕರಾವಳಿಯಲ್ಲಿ ವಾಯುಭಾರ ತಿರುವಿಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಸೆಪ್ಟೆಂಬರ್ 2-3ರಿಂದ ರಾಜ್ಯದ ದಕ್ಷಿಣ ಒಳನಾಡು ಹಾಗೂ ಮಲೆನಾಡಿನ ಕೆಲವೆಡೆ ಮಳೆ ಹೆಚ್ಚಾಗುವ ಸಾಧ್ಯತೆಯಿದೆ.
ಉಳಿದಂತೆ ಕರಾವಳಿ ಭಾಗದಲ್ಲಿ ಸುಳ್ಯ, ಕಡಬ ಸೇರಿದಂತೆ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ತುಸು ಹೆಚ್ಚಿನ ಮಳೆಯಾಗಬಹುದು. ಉತ್ತರ ಒಳನಾಡಿನ ಹಾವೇರಿ, ಬಳ್ಳಾರಿ, ಗದಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆಯ ಜೊತೆಗೆ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇರಲಿದೆ.
ಒಟ್ಟಾರೆ ಸದ್ಯ ಮಳೆ ಬಿಡುವು ನೀಡಿದ್ರೂ ಕೂಡ ಸೆಪ್ಟೆಂಬರ್ ಆರಂಭದ ವಾಯುಭಾರದ ಬೆಳವಣಿಗೆ ರಾಜ್ಯದ ಮಳೆ ಪರಿಸ್ಥಿತಿಯಲ್ಲಿ ಬದಲಾವಣೆ ತರಬಹುದು ಎನ್ನಲಾಗಿದೆ.



