ಕತಾರ್ ಭಾರತೀಯ ಸಮುದಾಯದವರ ನಡುವೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದೇನು?

ಹೊಸದಿಗಂತ ದಿಜಿಟಲ್‌ ಡೆಸ್ಕ್‌
ಭಾರತ ಮತ್ತು ಕತಾರ್ ನಡುವಿನ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಗಾಢವಾಗುತ್ತ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಲುಕ್ ವೆಸ್ಟ್ ನೀತಿಯನ್ನು ಜಾರಿಗೊಳಿಸಿದ ಬಳಿಕ ಭಾರತ-ಕತಾರ್ ನಡುವಣ ಬಾಂಧವ್ಯ ಮತ್ತಷ್ಟು ಬಲಗೊಂಡಿದೆ. ಕತಾರ್‌ ನೊಂದಿಗೆ ಮತ್ತಷ್ಟು ಕ್ಷೇತ್ರಗಳಲ್ಲಿ ಸಹಭಾಗಿತ್ವ ಸಾಧಿಸಲು ಪ್ರಧಾನಿ ಉತ್ಸುಕರಾಗಿದ್ದಾರೆ. ಕತಾರ್‌ನಲ್ಲಿ ನೆಲೆಸಿರುವ 7.80 ಲಕ್ಷ ಭಾರತೀಯ ಸಮುದಾಯವು ಎರಡು ದೇಶಗಳನ್ನು ಬೆಸೆಯುವ ಕೊಂಡಿಯಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಅನೇಕ ಭಾರತೀಯರು ಇಲ್ಲಿ 40 ವರ್ಷಗಳಿಗಿಂತಲೂ ಹಿಂದಿನಿಂದ ವಾಸವಿದ್ದಾರೆ. ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳು ಬೆಳೆಯಲು ಮತ್ತು ಮತ್ತಷ್ಟು ಪ್ರಗತಿಯನ್ನು ಸಾಧಿಸಲು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬರ ಕೊಡುಗೆಗಳನ್ನು ನಾವು ಅಪೇಕ್ಷಿಸುತ್ತಿದ್ದೇವೆ ಎಂದು ಅವರು ಕರೆ ನೀಡಿದರು.
ಕೊರೋನಾ ಸಾಂಕ್ರಾಮಿಕದ ಸವಾಲಿನ ಹೊರತಾಗಿಯೂ, ನಾವು ಕಳೆದ ವರ್ಷ 15 ಶತಕೋಟಿ ಯುಎಸ್‌ ಡಾಲರ್‌ ಗಳಿಗಿಂತಲೂ ಹೆಚ್ಚಿನ ದ್ವಿಪಕ್ಷೀಯ ವ್ಯಾಪಾರವನ್ನು ದಾಖಲಿಸಿದ್ದೇವೆ. ಭಾರತವು ಕತಾರ್‌ನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿತ್ತು. 2020ರ ಮಾರ್ಚ್‌ ನಿಂದ ಭಾರತದಲ್ಲಿ ಕತಾರ್‌ನ ವಿದೇಶಿ ನೇರ ಹೂಡಿಕೆ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. ಕತಾರ್‌ನಲ್ಲಿರುವ 50ಕ್ಕೂ ಹೆಚ್ಚಿನ ಭಾರತೀಯ ಕಂಪನಿಗಳು ಮತ್ತು 15,000 ಜಂಟಿ ಸ್ವಾಮ್ಯದ ಕಂಪನಿಗಳು ಭಾರತ-ಕತಾರ್ ಆರ್ಥಿಕ ಪಾಲುದಾರಿಕೆಗೆ ವೇಗವನ್ನು ನೀಡುತ್ತಿವೆ. ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಾಗಿದೆ.
ನಾವು ಸಮಗ್ರ ಇಂಧನ ಪಾಲುದಾರಿಕೆಯನ್ನು ನಿರ್ಮಿಸುತ್ತಿದ್ದೇವೆ. ಭಾರತ ಮತ್ತು ಕತಾರ್ ನಡುವಿನ ಸಹಕಾರವು ರಕ್ಷಣೆ, ಭದ್ರತೆ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಬಲಗೊಳ್ಳುತ್ತಿದೆ. ನಿನ್ನೆಯಷ್ಟೆ ನಾವು ಕತಾರ್ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಪೀಠವನ್ನು ಸ್ಥಾಪಿಸಲು ಹಾಗೂ ಕ್ರೀಡೆ ಮತ್ತು ಸಂಸ್ಕೃತಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದುವರಿಸಲು ಒಪ್ಪಿಗೆ ಸೂಚಿಸಿದ್ದೇವೆ.
ಭಾರತ- ಕತಾರ್‌ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪನೆಯಾದ ಜ್ಞಾಪಕಾರ್ಥವಾಗಿ ಶೀಘ್ರದಲ್ಲೇ 50ನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!