ಇಷ್ಟಕ್ಕೂ ‘ದೇವರ ನಾಡಿ’ನಲ್ಲಿ ನಡೆಯುತ್ತಿರುವುದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪಶ್ಚಿಮದಲ್ಲಿ ಅರಬ್ಬೀ ಸಮುದ್ರ , ಪೂರ್ವದಲ್ಲಿ ಸೊಂಪಾದ ಪಶ್ಚಿಮ ಘಟ್ಟಗಳು, ದಟ್ಟವಾದ ಕಾಡುಗಳು , ವಿಲಕ್ಷಣ ವನ್ಯಜೀವಿಗಳು , ನದಿ – ಕೆರೆಗಳ ಜಾಲ , ಶಾಂತವಾದ ವಿಸ್ತಾರ ಹಿನ್ನೀರು , ಪ್ರಶಾಂತವಾದ ಕಡಲ ತೀರ , ದೈವದತ್ತವಾದ ನೈಸರ್ಗಿಕ ಸಂಪತ್ತು , ಆಕರ್ಷಕ ಲಲಿತ ಕಲೆಗಳು ಹಾಗೂ ವಿಶಿಷ್ಟವಾದ ಸಂಪ್ರದಾಯಗಳು ಸ್ವರ್ಗವನ್ನೇ ಧರೆಗಿಳಿಸಿದ ಅನುಭವ ನೀಡುವ ಕೇರಳವನ್ನು ‘ದೇವರ ಸ್ವಂತ ನಾಡು’ ಎನ್ನುವುದು ಅತಿಶಯೋಕ್ತಿಯೇನಲ್ಲ. ಇದಕ್ಕೆ ಐತಿಹಾಸಿಕ , ಪೌರಾಣಿಕ ಹಿನ್ನಲೆಗಳೂ ಇವೆ.
ಪಾಠ್ಯಂ ನಾಟ್ಯಂ ತಥಾ ಗಾನಂ
ಚಿತ್ರಂ ವಾದಿತ್ವಮೇವ ಚ
ವೇದಂ ಮಂತ್ರಾರ್ಥ ವಾಚನೇ
ಸಮವೇತದ್ ಭವಿಷ್ಯತಿ – ನಾಟ್ಯಶಾಸ್ತ್ರ
ವೇದ ವಿದ್ಯೆಯೇ ಕ್ರೀಡೆಯಾಗಿ , ರಂಜನೆಯಾಗಿ , ದೃಶ್ಯವಾಗಿ , ಶ್ರಾವ್ಯತೆಯಿಂದ ಕೂಡಿರುವುದು ಕಲೆಯೆಂದು ನಾಟ್ಯಶಾಸ್ತ್ರದಲ್ಲಿ ಹೇಳಿದ್ದಾರೆ. ಅದಕ್ಕಾಗಿಯೇ ಲಲಿತಕಲೆಗಳನ್ನು ದೈವಿಕವೆಂದು ಹೇಳಲಾಗಿದೆ.
ಆದರೆ ದೇವರ ನಾಡಿನಲ್ಲಿ ನಡೆಯುತ್ತಿರುವುದೇನು…?
2022 ರ ಮಾರ್ಚ್ ತಿಂಗಳಿನಲ್ಲಿ ಪಾಲಕ್ಕಾಡಿನ ಶಾಲೆಯೊಂದರಲ್ಲಿ ಪ್ರಸಿದ್ಧ ಕಲಾವಿದೆ ನೀನಾ ಪ್ರಸಾದರ ಮೋಹಿನಿಯಾಟ್ಟಂ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಜಿಲ್ಲಾ ನ್ಯಾಯಾಧೀಶರು ಆ ಕಾರ್ಯಕ್ರಮಕ್ಕೆ ಅಡ್ಡಗಾಲು ಹಾಕಿಯೇ ಬಿಟ್ಟರು. ಕಲಾವಿದೆ ರಂಗದಲ್ಲಿರುವಾಗಲೇ ಪೋಲೀಸ್ ದಾಳಿ ನಡೆಸಿ ಕಾರ್ಯಕ್ರಮ ನಿಲ್ಲುವಂತೆ ಮಾಡಿದ್ದು ಕಲಾ ಸರಸ್ವತಿಗೆ ಮಾಡಿದ ಅವಮಾನವಲ್ಲದೆ ಮತ್ತೇನು…?
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧನಾಗಿದ್ದವನೊಬ್ಬ ತನ್ನ ಕುಟುಂಬದ ಜೊತೆ ದೇವಸ್ಥಾನಗಳಿಗೆ ಭೇಟಿಯಾದದ್ದನ್ನು ತನ್ನ ಖಾತೆಯಲ್ಲಿ ಹಂಚಿಕೊಂಡದ್ದಕ್ಕೆ ಮತೀಯವಾದಿಗಳು ಸೈಬರ್ ಆಕ್ರಮಣ ನಡೆಸಿದ್ದು…
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದರ್ಶನ ಮಾಡಿದ ನೇತಾರನನ್ನು ಪಕ್ಷದಿಂದ ಹೊರಗಟ್ಟಿದ್ದು…
ಶಬರಿಮಲೆ ಯಾತ್ರೆಗೈದ ಯುವಕನೊಬ್ಬನ ತಂದೆಯನ್ನು ಅಮಾನತು ಮಾಡಿದ್ದು…
ಇಂತಹ ಘಟನೆಗಳು ಲೆಕ್ಕವಿಲ್ಲದಷ್ಟು.
ಇತ್ತೀಚೆಗೆ ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಯಕ್ಷಗಾನ ಪ್ರದರ್ಶನದ ಮೊದಲು ಚೌಕಿಪೂಜೆಗೆ ಅಡ್ಡಿಪಡಿಸಿ , ಬೆಳಗಿಸಿದ ದೀಪವನ್ನು ನಂದಿಸಿ ಕಲಾ ದೇವತೆಗೆ ಅವಮಾನ ಮಾಡಿದ್ದು ವಿಕೃತ ಮನದ ಮತ್ತೊಂದು ರೂಪ.
ದೇವರ ನಾಡಿನಲ್ಲಿ ವಿಜೃಂಭಿಸುತ್ತಿರುವ ದೆವ್ವಗಳ ಅಟ್ಟಹಾಸವನ್ನು ಹುಟ್ಟಡಗಿಸಲು ದೇವರೇ ಹುಟ್ಟಿಬರಬೇಕೇನೋ….!!!

: ಅನುಪಮಾ ರಾಘವೇಂದ್ರ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!