ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭೀಕರ ಪ್ರವಾಹದಿಂದ ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯ ಸುರಂಗಕ್ಕೆ ನೀರು, ಮಣ್ಣು ಮತ್ತು ಅವಶೇಷಗಳು ನುಗ್ಗಿ ಸುರಂಗದೊಳಗೆ ಇಬ್ಬರು ಕಾರ್ಮಿಕರು ಲಾಕ್ ಆಗಿದ್ದರು.
ಬರೋಬ್ಬರಿ ಒಂಬತ್ತು ದಿನಗಳ ನಂತರ ಕಾರ್ಮಿಕರನ್ನು ಸುರಂಗದಿಂದ ಹೊರಕ್ಕೆ ಕರೆತರಲಾಗಿದೆ. ಮೆಕ್ಯಾನಿಕಲ್ ಫೋರ್ಮ್ಯಾನ್ ಸಂಜಯ್ ಸಾಹ್ ಮತ್ತು ಮೆಕ್ಯಾನಿಕಲ್ ಮೇಲ್ವಿಚಾರಕ ಕಬೀರ್ ಮಹಾರ್ಜನ್ ಎನ್ನುವವರನ್ನು ಸುರಕ್ಷಿತವಾಗಿ ಸುರಂಗದಿಂದ ಹೊರಕ್ಕೆ ಎಳೆದುಕೊಳ್ಳಲಾಗಿದೆ.
ಈ ಸುರಂಗದೊಳಗೆ ಇರುವ ಜನರ ಆರೋಗ್ಯ ಸ್ಥಿತಿ ಹೇಗಿದೆ? ಅವರು ಬದುಕಿದ್ದಾರೋ ಇಲ್ಲವೋ ಎಂದುಕೊಳ್ಳುತ್ತಿದ್ದೆವು. ಅಷ್ಟರಲ್ಲಿ ಸುರಂಗದ ಒಳಗಿನಿಂದ ಜನರ ದಿನ ಕೇಳಿಸಿತ್ತು. ಹೆದರಬೇಡಿ ಸ್ವಲ್ಪ ಸಮಯದಲ್ಲೇ ನಿಮ್ಮನ್ನು ರಕ್ಷಣೆ ಮಾಡಲಿದ್ದೇವೆ ಎಂದು ಆಶ್ವಾಸನೆ ನೀಡಿದ್ದೆವು. ಆಗ ಸರಿ ಸರ್ ಧನ್ಯವಾದಗಳು ಎಂದು ಒಳಗಿನಿಂದ ಹೇಳಿದ್ದು ಕೇಳಿಸಿತ್ತು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಇಂಜಿನಿಯರ್ ಹಾಗೂ ರಾಷ್ಟ್ರೀಯ ಸ್ವತಂತ್ರ ಪಕ್ಷದ ಶಾಸಕ ಶ್ರೀರಾಮ್ ನ್ಯೂಪಾನೆ ತಿಳಿಸಿದ್ದಾರೆ.



