ಹೊಸದಿಗಂತ ವರದಿ,ವಿಜಯಪುರ:
ಪಂಚ ಪೀಠಗಳಾದರೂ ಏನು ತಪ್ಪು ಎಂಬುದು ಹರಿಹರ ಪೀಠದ ಜಗದ್ಗುರು ಡಾ. ಮಹಾಂತ ಶ್ರೀಗಳ ಕನಸಿತ್ತು. ಹಾಗಾಗಿ ಅವಶ್ಯಕತೆಗೆ ಅಣುಗುಣವಾಗಿ ಮೂರನೇ ಪೀಠ ಸ್ಥಾಪನೆ ಮಾಡಲಾಗುತ್ತಿದೆ ಎಂದು ಮನಗೂಳಿಯ ಸಂಗನಬಸವ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲರ ಒಪ್ಪಿಗೆ ಮೇರೆಗೆ ಮಹಾದೇವ ಶಿವಾಚಾರ್ಯರನ್ನು ಆಯ್ಕೆ ಮಾಡಲಾಗಿದೆ ಎಂದರು.
ಇದು ನಿರಾಣಿ ಪೀಠ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ನಿರಾಣಿ ಎಲ್ಲ ಸಮುದಾಯಗಳಿಗೆ ಸಹಾಯ ಮಾಡಿದ್ದಾರೆ. ನಮಗೆ ಇದುವರೆಗೂ ನಿರಾಣಿಯವರು ಸಂಪರ್ಕದಲ್ಲಿ ಇಲ್ಲ ಎಂದರು.
ಸ್ವಾಮೀಜಿಗಳು ಮನೆಗೆ ಬಂದರೆ ಅವರಿಗೆ ಸಹಾಯ ಮಾಡುವ ಮನಸ್ಸು ನಿರಾಣಿಗಿದೆ. ಹಾಗಾಗಿ ಇದು ನಿರಾಣಿಯವರ ಕುಮ್ಮಕ್ಕಿನಿಂದ ಸ್ಥಾಪಿತವಾಗುವ ಪೀಠ ಅಲ್ಲ ಎಂದರು.
ಬಬಲೇಶ್ವರ ಬ್ರಹನ್ಮಠದ ಮಹಾದೇವ ಶಿವಾಚಾರ್ಯ ಮಾತನಾಡಿ, ಎರಡೂ ಪೀಠಗಳು ಧರ್ಮ ರಕ್ಷಣೆ, ಸಂಸ್ಕಾರ ಕಲಿಸುವುದು, ಧಾರ್ಮಿಕ ಭೋದನೆ ಮಾಡಿಲ್ಲ. ಹಾಗಾಗಿ ಮೂರನೇ ಪೀಠ ಮಾಡುವ ಯೋಜನೆ ಮಾಡಿದ್ದೇವೆ ಎಂದರು.
ಈಗಾಗಲೇ ಎರಡು ಪೀಠಗಳು ಇದ್ದರೂ ಮೂರನೇ ಪೀಠ ಅವಶ್ಯಕತೆ ಇದೆ ಎಂದು ಮನಗಂಡೆವು. ಜಮಖಂಡಿ ಭಾಗದಲ್ಲಿ ಕಳೆದ ಒಂದು ವರ್ಷದಿಂದ 60 ಸ್ವಾಮೀಜಿಗಳು ಸೇರಿ ಹಲವುಬಾರಿ ಸಭೆಗಳನ್ನು ಮಾಡಿದ್ದೇವೆ ಎಂದರು.
ಈ ಹಿಂದೆ ಹರಿಹರ ಪೀಠಕ್ಕೆ ನಮ್ಮನ್ನೇ ಪೀಠಾಧ್ಯಕ್ಷರನ್ನಾಗಿಸಲಿದ್ದೇವೆ ಎಂದು ಹರಿಹರದಿಂದ ಬಂದಿದ್ದ ಹಲವು ಹಿರಿಯರು ಹೇಳಿದ್ದರು. ಬಳಿಕ ಹರಿಹರ ಪೀಠದಿಂದ ನಮ್ಮನ್ನು ಕೈ ಬಿಡಲಾಗಿತ್ತು, ಹಾಗಾಗಿ ನಾವು ಸುಮ್ಮನಾಗಿದ್ದೆವು. ಇದೀಗ ಮೂರನೇ ಪೀಠದ ಅವಕಾಶ ಬಂದಿದೆ, ಈಗ ನಾನು ಪೀಠಾಧ್ಯಕ್ಷರಾಗಲು ನಾವು ಒಪ್ಪಿಗೆಯನ್ನು ನೀಡಿದ್ದೇವೆ. ಎಲ್ಲಮಠಾಧೀಶರು ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ಬುರಣಾಪುರ ಯೋಗೇಶ್ವರಿ ಮಾತಾ, ಮುಖಂಡ ಸುರೇಶ ಬಿರಾದಾರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.