ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಮಳೆಗಾಗಿ ಪಾದಯಾತ್ರೆ ಮಾಡುವ ವೇಳೆಯೇ ಜೋರಾಗಿ ಮಳೆ ಬಂದಿದ್ದು, ಖುಷಿಯಲ್ಲಿ ಜನ ಕುಣಿದು ಕುಪ್ಪಳಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರು, ಮುಖಂಡರು, ರೈತರು, ಜನರು ಎಲ್ಲರೂ ಕೂಡಿ ಮಳೆಗಾಗಿ ಪಾದಯಾತ್ರೆ ಮಾಡಿದ್ದಾರೆ. ಈ ವೇಳೆ ಜೋರಾದ ಮಳೆ ಬಿದ್ದಿದೆ. ಜನ ಸಂಭ್ರಮದಲ್ಲಿ ಕಲಾ ತಂಡಗಳ ಜೊತೆ ಕುಣಿದಿದ್ದಾರೆ.
ಪಟ್ಟಣದ ಮಾರಿಕಾಂಬಾ ದೇವಿ ದೇವಸ್ಥಾನದಿಂದ ನೀರಮಾನ್ವಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನವರೆಗೆ ಪಾದಯಾತ್ರೆ ಮಾಡಲಾಯಿತು. ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ವೆಂಕಟಪ್ಪ ನಾಯಕ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
ಪಾದಯಾತ್ರೆ ಮಧ್ಯದಲ್ಲೇ ಜೋರಾಗಿ ಮಳೆ ಸುರಿದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಆರಂಭದಿಂದ ಬಾರದ ಮಳೆ ಜೋರಾಗಿ ಸುರಿದಿದ್ದಕ್ಕೆ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಮಳೆಯಲ್ಲೇ ಪಾದಯಾತ್ರೆ ನಡೆಸಿ, ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.



