ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಮತದಾರ ಪೂರ್ಣವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಆಶೀರ್ವಾದ ಮಾಡಿದ್ದಾರೆ. ಇದಾದ ನಾಲ್ಕು ದಿನಗಳ ನಂತರವೂ ರಾಜ್ಯದ ಮುಖ್ಯಮಂತ್ರಿ ಪಟ್ಟ ಯಾರಿಗೆ ದೊರೆಯಲಿದೆ ಎನ್ನುವ ವಿಷಯ ಮಾತ್ರ ಬಹಿರಂಗವಾಗಿಲ್ಲ.
ಕಾಂಗ್ರೆಸ್ನಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಕುರ್ಚಿಗಾಗಿ ಫೈಟ್ ನಡೆದಿದ್ದು, ಹೈ ಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುತ್ತೀವಿ ಎಂದು ಇಬ್ಬರೂ ಹೇಳಿದ್ದಾರೆ.
ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಿದ ಮೇಲೆಯೂ ಸಿಎಂ ಯಾರೆನ್ನುವುದು ಫೈನಲ್ ಆಗಿಲ್ಲ. ಇಂದು ಬೆಳಗ್ಗೆ 11 ಗಂಟೆಗೆ ಫೈನಲ್ ಮೀಟಿಂಗ್ ನಡೆಯಲಿದ್ದು, ಸುದ್ದಿಗೋಷ್ಠಿ ನಡೆಸಿ ಸಿಎಂ ಯಾರೆನ್ನುವುದನ್ನು ಘೋಷಣೆ ಮಾಡಲಾಗುತ್ತದೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿಕೆಶಿ ಮೀಟಿಂಗ್ನಲ್ಲಿ ಇರಲಿದ್ದಾರೆ. ರಾಗಾ ಸೂಚನೆಯಂತೆ ಖರ್ಗೆ ಇಬ್ಬರನ್ನೂ ಕರೆದು ತಮ್ಮ ಬೇಡಿಕೆಯೇನು, ಮನಸಿನಲ್ಲೇನಿದೆ ಎನ್ನುವ ಬಗ್ಗೆ ಖರ್ಗೆ ವಿಚಾರಿಸಿದ್ದಾರೆ. ಆದರೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಡಿಕೆಶಿ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದು ಕುಳಿತಿದ್ದು, ಸಿಎಂ ಮಾಡದೇ ಹೋದರೆ ಬೇರೆ ಯಾವ ಸ್ಥಾನವೂ ಬೇಡ, ಶಾಸಕನಾಗಿ ಕೆಲಸ ಮಾಡುತ್ತೇನೆ, ಪಕ್ಷದ ಕರ್ತವ್ಯ ಮಾಡುತ್ತೇನೆ ಆದರೆ ಸರ್ಕಾರದಲ್ಲಿ ಭಾಗಿಯಾಗೋದಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ತಾವೇ ಸಿಎಂ ಆಗುವ ಕಾನ್ಫಿಡೆನ್ಸ್ ಹೊಂದಿದ್ದಾರೆ.
ಇಂದು ಈ ಎಲ್ಲ ಕುತೂಹಲಕ್ಕೆ ಬ್ರೇಕ್ ಬೀಳಲಿದ್ದು ರಾಜ್ಯದ ಮುಂದಿನ ಸಿಎಂ ಯಾರು ಎನ್ನುವ ನಿರ್ಧಾರ ಹೊರಬೀಳಲಿದೆ.