ಹೊಸದಿಗಂತ ವರದಿ, ದಾವಣಗೆರೆ:
ಅಧಿಕಾರ ಸಿಕ್ಕರೆ ಯಾರು ಬೇಡ ಎನ್ನುತ್ತಾರೆ? ನನಗೂ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ಸಂದರ್ಭ ಸಿಕ್ಕರೆ ನಾನೇನೂ ಬೇಡ ಅನ್ನುವುದಿಲ್ಲ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಅಧಿಕಾರ ಬೇಡವೆನ್ನುತ್ತಾರೆ? ನಾನೇನೂ ಸನ್ಯಾಸಿಯಲ್ಲ. ಅಧಿಕಾರದ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಆದರೆ ನಮಗಿಂತಲೂ ಹಿರಿಯರಿದ್ದಾರೆ. ಅಂತಹ ಹಿರಿಯರ ಕೋಟಾ ಮುಗಿದ ಮೇಲೆ ನನಗೆ ಕೊಡಲಿ. ಸದ್ಯಕ್ಕೆ ನಾನು ಶಾಸಕನಾಗಿದ್ದೇನೆ. ಆಸೆಗೂ ಇತಿಮಿತಿ ಇದೆ. ಮೊದಲು ಹಿರಿತನಕ್ಕೆ ಗೌರವ ಸಿಗಲಿ. ಆಮೇಲೆ ನಮಗೆ ಅವಕಾಶ ನೀಡಲಿ ಎಂದರು.
ಕೆಪಿಸಿಸಿ ಅಧ್ಯಕ್ಷ ಪದವಿ, ಮುಖ್ಯಮಂತ್ರಿ ಪದವಿಗಳು ಖಾಲಿ ಇದೇನಾ? ಅವು ಖಾಲಿಯಾದ ನಂತರ ನೂರಕ್ಕೆ ನೂರು ಅದರ ಬಗ್ಗೆ ಖಂಡಿತವಾಗಿಯೂ ಮಾತನಾಡುತ್ತೇನೆ. ಈಗ ಅವುಗಳ ಬಗ್ಗೆ ಮಾತನಾಡಿದರೆ ಅಪ್ರಸ್ತುತ ಎನಿಸುತ್ತದೆ. ಸಚಿವ ರಾಜಣ್ಣ ದೊಡ್ಡವರು. ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ. ರಾಜಣ್ಣ ಹೇಳಿದ್ದೇ ಅಂತಿಮವಾಗುವುದಿಲ್ಲ. ನಮ್ಮ ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಪವರ್ ಶೇರಿಂಗ್ ಅನ್ನೋ ವಿಚಾರವೇ ಇಲ್ಲವೆಂದಾಗ ಅದರ ಬಗ್ಗೆ ಮಾತನಾಡುವುದು ಏಕೆ? ಎಂದು ಅವರು ಪ್ರಶ್ನಿಸಿದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದರೂ ವಿಪಕ್ಷದವರು ಹೋರಾಟ ಮಾಡುತ್ತಿದ್ದಾರೆ. ಅವರು ಹೋರಾಟ ಮಾಡಿಕೊಂಡೇ ಇರಲಿ. ಸತ್ಯಕ್ಕಂತೂ ಜಯ ಸಿಕ್ಕಿದೆ ಎಂದು ಅವರು ಇದೇ ವೇಳೆ ಸಮರ್ಥಿಸಿಕೊಂಡರು.