ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಗಳಾಗಿ, ಅದು ನನಗೆ ಬೇಕಾಗಿಲ್ಲ. ನನಗೆ ಬೇಕಿರುವುದು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಷ್ಟೇ ಎಂದು ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.
ಕೋಲಾರದಲ್ಲಿಂದು ನಡೆದ ಕಾಂಗ್ರೆಸ್ ಜೈ ಭಾರತ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ್ ಜೋಡೋ ಯಾತ್ರೆಯ ಮೂಲಕ ಸಂಚರಿಸಿ ಜನರ ದು:ಖ ದುಮ್ಮಾನಗಳನ್ನು ಕೇಳಿದ್ದಾರೆ. ಬಂಗಾರದ ಜಿಲ್ಲೆ ಕೋಲಾರ. ಇಡೀ ದೇಶದಲ್ಲಿ ಮೂರೇ ಮೂರು ಬಂಗಾರ ಗಣಿಗಳಿವೆ. ಅದರಲ್ಲಿ ಮೂರೂ ಕೂಡಾ ಕರ್ನಾಟಕದಲ್ಲಿವೆ. ಬರಗಾಲಕ್ಕೆ ತುತ್ತಾದ ಈ ಜಿಲ್ಲೆಗೆ ಈ ಕಡೆ ನೀರಾವರಿವಾಗಲೀ, ಕೃಷಿಗಾಗಲೀ ಸರ್ಕಾರ ಅಷ್ಟೊಂದು ಮಹತ್ವ ನೀಡುತ್ತಿರಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ಮೇಲೆ ಕೆ.ಸಿ.ವ್ಯಾಲಿ ನೀರಿನ ಯೋಜನೆ ಮಾಡಿದರು. ಈ ಕೆಲಸ ಮಾಡಿದ್ದಕ್ಕಾಗಿ ಇಂದು ನೂರಾರು ಕೆರೆಗಳು ತುಂಬಿವೆ. ಲಕ್ಷಾಂತರ ಎಕರೆ ಕೃಷಿ ಮಾಡುತ್ತಿದ್ದಾರೆ ಎಂದರು.
‘ಯಾರೇ ಮುಖ್ಯಮಂತ್ರಿಗಳಾಗಿ ನನಗೆ ಬೇಕಾಗಿಲ್ಲ’
ನೀವು ಯಾರೇ ಮುಖ್ಯಮಂತ್ರಿಗಳಾಗಿ ನನಗೆ ಬೇಕಾಗಿಲ್ಲ. ನನಗೆ ಬೇಕಾಗಿರುವುದು ಕಾಂಗ್ರೆಸ್ ಪಾರ್ಟಿ ಅಧಿಕಾರಕ್ಕೆ ಬರಬೇಕು. ನೀವು ಸಿಎಂ ಸ್ಥಾನದ ಕುರಿತು ತಲೆಕೆಡಿಸಿಕೊಳ್ಳಬೇಡಿ, ಜನ ತೀರ್ಮಾನ ಮಾಡ್ತಾರೆ, ಎಲ್ಲರೂ ಕೈಗೂಡಿದರೆ ಮಾತ್ರ ಆಗುತ್ತದೆ. ಒಂದು ಕೈನಲ್ಲಿ ಚಪ್ಪಾಳೆ ತಟ್ಟಲು ಆಗುವುದಿಲ್ಲ ಎಂದು ವೇದಿಕೆ ಮೇಲಿದ್ದ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಪರೋಕ್ಷವಾಗಿ ಕಿವಿಮಾತು ಹೇಳಿದರು.