ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಸೇನೆ ಪಕ್ಷಕ್ಕಾಗಿ ನಡೆಯುತ್ತಿರುವ ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ನಡುವಿನ ಹೋರಾಟದಲ್ಲಿ ಠಾಕ್ರೆ ಬಣಕ್ಕೆ ಹಿನ್ನಡೆಯಾಗಿದೆ.
ಶಿವಸೇನೆ ಯಾರ ಪಕ್ಷ? ಯಾವ ಬಣ ಶಿವ ಸೇನೆ ಪಕ್ಷ ಚಿಹ್ನೆ ಅಡಿ ಸ್ಪರ್ಧಿಸಬೇಕು? ಅನ್ನೋ ವಿವಾದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಶಿವ ಸೇನೆ ಯಾರ ಪಕ್ಷ ಅನ್ನೋ ನಿರ್ಧಾರವನ್ನು ಚುನಾವಣಾ ಆಯೋಗ ಮಾಡಲಿ ಎಂದು ಕೋರ್ಟ್ ಹೇಳಿದೆ.
ಇನ್ನು ಕುರಿತು ಏಕನಾಥ್ ಶಿಂಧೆ ಬಣವೂ ಕೂಡ ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿತ್ತು. ಇದೀಗ ಅವರ ಪರ ಆದೇಶ ಬಂದಂತಾಗಿದೆ.
ಶಿವಸೇನೆ ಪಕ್ಷದಿಂದ 39 ಶಾಸಕರ ಜೊತೆ ಬಂಡೆದ್ದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣವು ಶಿವಸೇನೆಯ ಚಿಹ್ನೆಯಾದ ‘ಬಿಲ್ಲು ಮತ್ತು ಬಾಣ’ ತಮ್ಮದು ಎಂದು ಚುನಾವಣಾ ಆಯೋಗಕ್ಕೆ ಪತ್ರ ನೀಡಿತ್ತು. ಅದಕ್ಕೆ ಉದ್ಧವ್ ಬಣ ಆಕ್ಷೇಪ ವ್ಯಕ್ತಪಡಿಸಿತ್ತು. ಎರಡೂ ಬಣದ ನಾಯಕರು ದಾಖಲೆ ಸಲ್ಲಿಸಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಏಕನಾಥ್ ಶಿಂಧೆ ಬಣದ ವಿರುದ್ಧದ ಬಹುತೇಕ ಎಲ್ಲಾ ಹೋರಾಟದಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆಯಾಗಿದೆ. ಆದರೆ ಶಿವಾಜಿ ಪಾರ್ಕ್ನಲ್ಲಿ ದಸರಾ ಆಚರಣೆ ವಿಚಾರದಲ್ಲಿ ಠಾಕ್ರೆ ಬಣ ಮೇಲುಗೈ ಸಾಧಿಸಿತ್ತು.