ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಹೊಡೆಯುವ ಸರ್ಕಾರದ ಯೋಜನೆಯನ್ನು ಕಾಂಗ್ರೆಸ್ ಖಂಡಿಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಿಎಂ ಬೊಮ್ಮಾಯಿ ಅವರು ಪಂಡಿತ್ ಜವಾಹರ್ಲಾಲ್ ನೆಹರು ಅವರ ಜನ್ಮದಿನ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಇರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ್ದಾರೆ.
ರಾಜಕಾರಣ ಮಾಡಿ, ಬೇಡ ಎನ್ನೋದಿಲ್ಲ ಆದರೆ ಎಲ್ಲದರಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ. ಇದು ಯಾಕೋ ತೀರಾ ಕೆಳಮಟ್ಟಕ್ಕೆ ಹೋಗುತ್ತಿದೆ. ಬಣ್ಣದಲ್ಲಿ ಏನಿದೆ? ಕೇಸರಿ ಬಣ್ಣ ನಮ್ಮ ಧ್ವಜದಲ್ಲಿ ಇಲ್ಲವಾ? ಕೇಸರಿ ಕಂಡರೆ ಕಾಂಗ್ರೆಸ್ಗೆ ಅಲರ್ಜಿ ಏಕೆ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಈ ಯೋಜನೆಯನ್ನು ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಮಾಡುತ್ತಿದ್ದೇವೆ. ವಿವೇಕಾನಂದರು ಯಾವಾಗಲೂ ಕೇಸರಿ ಬಟ್ಟೆ ತೊಡುತ್ತಿದ್ದರು. ಹಾಗಾಗಿ ವಿವೇಕ ಯೋಜನೆಯ ಬಣ್ಣ ಕೇಸರಿಯಾಗಿದೆ. ಇದರ ಬಗ್ಗೆ ಭಾರೀ ಆಳವಾಗಿ ಯೋಚಿಸಿ ನಾನಾರ್ಥ ಕಲ್ಪಿಸುವ ಅಗತ್ಯ ಇಲ್ಲ. ಇಲ್ಲಿಯೂ ರಾಜಕಾರಣ ಮಾಡಬೇಡಿ ಎಂದಿದ್ದಾರೆ.