ಮಾವನ ಸಹಾಯದಿಂದ ಪತಿಯನ್ನ ಕೊಲೆಗೈದ ಪತ್ನಿ!

ಹೊಸದಿಗಂತ ವರದಿ ಮಡಿಕೇರಿ:

ತನ್ನ ಮಾವನ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿ ಅದನ್ನು ಸಹಜ ಸಾವು ಎಂದು ಬಿಂಬಿಸಿರುವ ಘಟನೆ ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ನಡೆದಿದ್ದು, ಇದೀಗ ಇಬ್ಬರೂ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಣ್ಣಿಮಾನಿ ಗ್ರಾಮದ ಡ್ಯಾನಿ ಕೊಲೆಯಾದ ವ್ಯಕ್ತಿ. ಕೊಲೆ ಆರೋಪದಡಿ ಆತನ ಪತ್ನಿ ಅನುಪ್ರಿಯಾ ಹಾಗೂ ತಂದೆ ಸುಗುಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 28ರಂದು ಡ್ಯಾನಿ ಮೃತಪಟ್ಟಿದ್ದರು. ಮದ್ಯ ಸೇವಿಸಿ ಬಿದ್ದು ಮೃತಪಟ್ಟಿರುವುದಾಗಿ ಪತ್ನಿ ಅನುಪ್ರಿಯಾ ದೂರು ನೀಡಿದ್ದರು.
ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅಸಹಜ ಸಾವು ಎಂದು ಗೊತ್ತಾದ ನಂತರ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡ್ಯಾನಿ ಮದ್ಯ ಸೇವಿಸಿ ಅವಾಚ್ಯ ಶಬ್ಧಗಳಿಂದ ತಂದೆ ಸುಗುಣ ಅವರನ್ನು ನಿಂದಿಸುತ್ತಿದ್ದ. ಇಬ್ಬರ ನಡುವೆ ಜಗಳ ನಡೆದು ಗಲಾಟೆ ತಾರಕಕ್ಕೇರಿ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಡ್ಯಾನಿ ಕೆಳಗೆ ಬಿದ್ದ ನಂತರ ಆತನ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಪತಿ ವಿಪರೀತ ಕಿರುಕುಳ ನೀಡುತ್ತಿದ್ದುದರಿಂದ ಕೊಲೆ ಮಾಡಿದ್ದಾಗಿ ಪತ್ನಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಮದುವೆಗೂ ಮುನ್ನವೇ ಡ್ಯಾನಿ ಹಾಗೂ ಅವರ ತಂದೆ ನಡುವೆ ಕಲಹ ನಡೆಯುತ್ತಿತ್ತು. ಆ ಬಳಿಕ ಪ್ರತ್ಯೇಕಗೊಂಡು ಐಟಿಐ ಮುಗಿಸಿ ಎಲೆಕ್ಟ್ರಿಕ್‌ ಕೆಲಸ ನಿರ್ವಹಿಸುತ್ತಿದ್ದರು. ಪಿಯುಸಿ ಓದುತ್ತಿದ್ದ ಅನುಪ್ರಿಯಾಳನ್ನು ಪ್ರೀತಿಸಿ ಮದುವೆಯಾಗಿದ್ದ ಡ್ಯಾನಿ ದಂಪತಿಗೆ ಮುದ್ದಾದ ಗಂಡು ಮಗುವಿದೆ. ನಾನು ನಿನ್ನನ್ನು ಬಿಎ ಓದಿಸಿದ್ದೇನೆ ನೀನು ಸಂಪಾದನೆ ಮಾಡುವ ಹಣ ನನಗೂ ಬೇಕು ಎಂದು ಗಲಾಟೆ ಮಾಡುತ್ತಿದ್ದ.  ಕುಡಿತಕ್ಕಾಗಿ ಹಣ ನೀಡುವಂತೆ ಪದೇಪದೇ ಹಲ್ಲೆ ಮಾಡುತ್ತಿದ್ದ ಎಂದು ಅನುಪ್ರಿಯಾ ಹೇಳಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!