ಹೊಸದಿಗಂತ ವರದಿ ಮುಂಡಗೋಡ:
ಕಾಡಿನಿಂದ ತಪ್ಪಿಸಿಕೊಂಡು ಬಂದ ಕಾಡು ಕೋಣವೊಂದು ತಾಲೂಕಿನ ಕುಸೂರ ಗ್ರಾಮದ ಮನೆಯೊಂದರ ಹಿತ್ತಲಲ್ಲಿ ಪ್ರತ್ಯಕ್ಷಗೊಂಡ ಅಪರೂಪದ ಘಟನೆ ನಡೆದಿದೆ.
ಕುಸೂರ ಗ್ರಾಮದ ದತ್ತಾತ್ರೇಯ ಜನ್ನು ಎಂಬುವರ ಮನೆಯ ಹಿತ್ತಲಲ್ಲಿ ಕಾಡುಕೋಣ ಕಾಡಿನಿಂದ ದಾರಿ ತಪ್ಪಿ ಆಕಸ್ಮಿಕವಾಗಿ ಬಂದಿದೆ. ಹಿತ್ತಲಲ್ಲಿರುವ ದತ್ತಾತ್ರೇಯ ಜನ್ನು ಅವರ ದನಕರುಗಳ ಜೊತೆಗೆ ಬೆರೆತು ನಿಂತುಕೊಂಡು ಅತ್ತಿತ್ತ ನೋಡುತ್ತಿತ್ತು. ನಂತರ ಹಿತ್ತಲಿಗೆ ಬಂದ ದತ್ತಾತ್ರೇಯ ಅವರು ಕಾಡುಕೋಣವನ್ನು ನೋಡಿ ಗಾಬರಿಗೊಂಡಿದ್ದಾರೆ.
ಆಮೇಲೆ ಕಾಡುಕೋಣ ಬಂದ ಸುದ್ದಿ ಕೇಳಿ ಗ್ರಾಮಸ್ಥರು ಬಂದಿದ್ದಾರೆ. ಗ್ರಾಮಸ್ಥರನ್ನೆಲ್ಲ ನೋಡಿದ ಕಾಡುಕೋಣ ಭೀತಿಯಿಂದ ಕಾಡಿನತ್ತ ಪಲಾಯನ ಬೆಳೆಸಿದೆ. ಕಾಡುಕೋಣ ಹೋದ ನಂತರ ಗ್ರಾಮಸ್ಥರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.



