ಹೊಸದಿಗಂತ ವರದಿ ಬಳ್ಳಾರಿ:
ಭ್ರಷ್ಟಾಚಾರ ಮುಕ್ತ ಬಳ್ಳಾರಿಯನ್ನಾಗಿ ಮಾಡುವೆ, ಬಳ್ಳಾರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಳಿಕ ಪ್ರತಿಕ್ರಿಯೆ ನೀಡಿ, ರಾಹುಲ್ ಗಾಂಧಿ ಅವರು ಐರನ್ ಲೆಗ್ ಅಲ್ಲ, ಅವರು ಗೋಲ್ಡನ್ ಲೆಗ್ ಇದ್ದಂತೆ. ಭಾರತ್ ಜೋಡೋ ಯಾತ್ರೆ ಹಿನ್ನೆಲೆ ರಾಜ್ಯಾದ್ಯಂತ ಅವರು ನಡೆಸಿದ ಪಾದಯಾತ್ರೆ ಹಿನ್ನೆಲೆ ರಾಜ್ಯದಲ್ಲಿ ಕಾಂಗ್ರೆಸ್ ಅಭೂತ ಪೂರ್ವ ಗೆಲುವು ಸಾಧಿಸಿದೆ. ಇದಕ್ಕಿಂತ ಬೇರೆ ಉದಾಹರಣೆಯಿಲ್ಲ, ಬಳ್ಳಾರಿ ಮಹಾನಗರ ಜನತೆ ಆರ್ಶಿವಾದವನ್ನು ಮರೆಯೋಲ್ಲ, ನನ್ನ ಕೊನೆ ಉಸಿರು ಇರೋವರೆಗೂ ಅವರ ಸೇವೆ ಮಾಡುವೆ ಎಂದಿದ್ದಾರೆ.
ಎದುರಾಳಿ ಜನಾರ್ದನರೆಡ್ಡಿ ಕುತಂತ್ರಕ್ಕೆ ಜನರು ಬಲಿಯಾಗದೇ ಪ್ರತಿಯೊಬ್ಬರೂ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಕ್ಷೇತ್ರದ ಮನೆ ಮಗನಾಗಿ ಸೇವೆ ಮಾಡುವೆ, ಬಳ್ಳಾರಿ ನಗರವನ್ನು ಸುಂದರ ನಗರವನ್ನಾಗಿ ಮಾಡುವೆ, ಪಕ್ಷದ ಎಲ್ಲ ಮುಖಂಡರು, ಹಿರಿಯರು, ನಮ್ಮ ಎಲ್ಲ ಕಾರ್ಯಕರ್ತರು ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಚಾನಾಳ್ ಶೇಖರ್ ಸೇರಿದಂತೆ ಇತರರಿದ್ದರು.