ಸಚಿವ ಮಲ್ಲಿಕಾರ್ಜುನ ವಿರುದ್ಧ ಎಫ್‌ಐಆರ್ ದಾಖಲಾಗದಿದ್ರೆ ನಾಳೆಯಿಂದಲೇ ಪ್ರತಿಭಟನೆ: ಛಲವಾದಿ ನಾರಾಯಣಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ವಿರುದ್ಧ ಸೋಮವಾರದೊಳಗೆ ಎಫ್‍ಐಆರ್ ದಾಖಲಿಸಬೇಕು. ಇಲ್ಲವಾದರೆ, ನಾನು ವಿಧಾನಸೌಧದ ಮುಂದಿರುವ ಡಾ.ಅಂಬೇಡ್ಕರ್ ಪ್ರತಿಮೆ ಅಥವಾ ಒಳಗಿರುವ ಗಾಂಧೀಜಿ ಅವರ ಪ್ರತಿಮೆ ಎದುರು ನಿರಶನ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಎಚ್ಚರಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ‘ಊರನ್ನು ಹೊಲಗೇರಿ ಮಾಡಬೇಡಿ; ಸ್ವಚ್ಛವಾಗಿಡಿ, ಹೊಲಸು ಮಾಡಬೇಡಿ’ ಎಂದು ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ ಎಂದು ವಿವರಿಸಿದರು.

ಆರೋಪಿಗಳ ಪರ ನಿಂತ ಸರ್ಕಾರ

ಅಂದು ಉಪೇಂದ್ರ ಅವರು ಊರಿದ್ದ ಕಡೆ ಹೊಲಗೇರಿ ಎಂದುದಕ್ಕೆ ದಲಿತ ಸಂಘಟನೆಗಳು ಹೋರಾಟ ಮಾಡಿದ್ದವು. ತಕ್ಷಣ ಎಫ್‍ಐಆರ್ ಮಾಡಿದ್ದರು. ಅವರಿಗೆ ಸಮಯ ಕೊಟ್ಟರು. ಆದರೆ, ಮಲ್ಲಿಕಾರ್ಜುನ್ ಅವರ ಹೇಳಿಕೆ ವಿರುದ್ಧ ದೂರನ್ನು ಪಡೆದಿಲ್ಲ. ಅವರ ಮೇಲೆ ಕ್ರಮ ಕೈಗೊಂಡಿಲ್ಲ. ಅವರ ರಕ್ಷಣೆಗೆ ಇಡೀ ಸರಕಾರ ನಿಂತಿದೆ ಎಂದು ಟೀಕಿಸಿದರು. ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಲಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಆರೋಪಿಗಳ ಪರ ನಿಂತಿದೆಯಲ್ಲದೆ, ಆರೋಪಿಗಳ ಕೇಸುಗಳನ್ನು ಹಿಂಪಡೆಯುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ದಲಿತ ವಿರೋಧಿ

ನಿನ್ನೆ ದಲಿತ ಮುಖಂಡರು ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ. ಇವತ್ತು ಅನೇಕರು ಅದನ್ನು ವಿರೋಧಿಸಿ ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ. ದಲಿತ ಸಮುದಾಯಗಳ ಬಗ್ಗೆ ಕಾಂಗ್ರೆಸ್ ಮುಖಂಡರು ಇತ್ತೀಚೆಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ಬಹಳಷ್ಟು ಸಾರಿ ಗಮನಿಸಿದ್ದೇವೆ. ಕಾಂಗ್ರೆಸ್ ದಲಿತ ವಿರೋಧಿ. ಕಾಂಗ್ರೆಸ್ ಒಳಗಿನ ನಡವಳಿಕೆ ನನಗೆ ಚೆನ್ನಾಗಿ ಗೊತ್ತಿದೆ ಎಂದು ತಿಳಿಸಿದರು.

ಕಮಿಷನ್‌ ದಂಧೆ ನಡೆಸುತ್ತಿರುವ ಕಾಂಗ್ರೆಸ್‌

ಡಿ.ಕೆ.ಶಿವಕುಮಾರ್, ಚಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ ಸೇರಿ ಸಚಿವರು ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ. ಕಂಟ್ರಾಕ್ಟರ್‌ಗಳ ಕಮಿಷನ್ ಆರೋಪದ ವಿಷಯವನ್ನು ಬೇರೆಡೆ ತಿರುಗಿಸಲು ಬಿಜೆಪಿಯನ್ನು ಮುಗಿಸಿ ಬಿಡುವುದಾಗಿ ಹೇಳುತ್ತಾರೆ. ಬಿಜೆಪಿಯನ್ನು ಯಾರೂ ಬಿಡುವವರಿಲ್ಲ. ನಮ್ಮನ್ನು ಬಿಟ್ಟು ಹೋದವರು ಭ್ರಮನಿರಸನರಾಗಿದ್ದಾರೆ. ಕಾಂಗ್ರೆಸ್ಸಿಗರ ಹೇಳಿಕೆ ದಾರಿ ತಪ್ಪಿಸುವ ಕೆಲಸ ಎಂದು ನುಡಿದರು.

ನಮ್ಮನ್ನು ಕಾಂಗ್ರೆಸ್‌ ಟಾರ್ಗೆಟ್‌ ಮಾಡ್ತಿದೆ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಮ್ಮ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್ ಸರಕಾರ ಟಾರ್ಗೆಟ್ ಮಾಡುತ್ತಿದೆ. ಇಂಥವರನ್ನು ಹದ್ದುಬಸ್ತಿನಲ್ಲಿಡಿ, ಇಂಥವರನ್ನು ಬಲಿ ಹಾಕಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಆದ್ದರಿಂದ ಸಕ್ರಿಯರ ವಿರುದ್ಧ ಎಫ್‍ಐಆರ್ ಮಾಡುತ್ತಿದ್ದಾರೆ. ತುಮಕೂರಿನ ಶಕುಂತಳಾ ಅವರ ಮೇಲೆ ಎಫ್‍ಐಆರ್ ಹಾಕಿದ್ದಾರೆ. ಆದರೆ, ಮಲ್ಲಿಕಾರ್ಜುನರ ಮೇಲೆ ಕ್ರಮ ಇಲ್ಲ ಎಂದು ಟೀಕಿಸಿದರು.

ದಲಿತ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು

ಕಾಂಗ್ರೆಸ್ಸಿಗರು ಅಧಿಕಾರದ ಮದದಿಂದ ಮೆರೆಯುತ್ತಿದ್ದಾರೆ. ಈ ದಲಿತ ವಿರೋಧಿ ಸರಕಾರಕ್ಕೆ ತಕ್ಕ ಶಾಸ್ತಿಯನ್ನು ನಾವು ಕಲಿಸಲೇಬೇಕಾಗಿದೆ. ದಲಿತ ಸಂಘಟನೆಗಳು ನಾಳೆಯಿಂದ ಬೀದಿಗಿಳಿದು ಹೋರಾಟ ಮಾಡಲಿದ್ದು, ನಾನು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!