ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಆಸ್ಪತ್ರೆಗಳ ವೈದ್ಯರ ವರ್ಗಾವಣೆಗೆ ಅನುಸರಿಸುತ್ತಿರುವ ಕೌನ್ಸೆಲಿಂಗ್ ವ್ಯವಸ್ಥೆಯಲ್ಲಿ ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಮುಂದಿನ ವರ್ಗಾವಣೆ ಅವಧಿಗೆ ಮುನ್ನ ಕೌನ್ಸೆಲಿಂಗ್ ನಿಯಮಗಳನ್ನು ಪರಿಷ್ಕರಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ನಿಯಮದಲ್ಲಿ ಪತಿ-ಪತ್ನಿ ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆಯಾಗುವುದು, ಅಂಗವಿಕಲ ವೈದ್ಯರಿಗೆ ಆಗುತ್ತಿರುವ ತೊಂದರೆ ಸೇರಿದಂತೆ ಕೆಲವು ಕೊರತೆಗಳಿವೆ. ಆಡಳಿತಾತ್ಮಕವಾಗಿ ಅನುಕೂಲಕರವಾಗಿದ್ದರೂ, ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ದೊರೆಯುವ ದೃಷ್ಟಿಯಿಂದ ನಿಯಮಗಳಲ್ಲಿ ತಿದ್ದುಪಡಿ ಅಗತ್ಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಈ ಕುರಿತು ಇಲಾಖೆಯ ಕಾರ್ಯದರ್ಶಿಗೆ ಪರಾಮರ್ಶೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ:
ಎಂಆರ್ಐ ಸ್ಕ್ಯಾನಿಂಗ್ ಸಮಸ್ಯೆ
ಇದೇ ವೇಳೆ ವೆನ್ಲಾಕ್ ಆಸ್ಪತ್ರೆಯ ಎಂಆರ್ಐ ಸ್ಕ್ಯಾನಿಂಗ್ ಸಮಸ್ಯೆಗೂ ಸಚಿವರು ಸ್ಪಂದಿಸಿದರು. ಮಧ್ಯಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿಯಿಂದ ಎಂಆರ್ಐ ಯಂತ್ರಗಳಿಗೆ ಅಗತ್ಯವಿರುವ ಹೀಲಿಯಂ ಅನಿಲದ ಕೊರತೆ ಉಂಟಾಗಿದ್ದು, ಹಳೆಯ ಯಂತ್ರದಲ್ಲಿ ಸ್ಕ್ಯಾನಿಂಗ್ ನಡೆಸಲು ತೊಂದರೆ ಎದುರಾಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ, ವೆನ್ಲಾಕ್ ಆಸ್ಪತ್ರೆಯ ದರದಲ್ಲೇ ಕೆಎಂಸಿ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೇವೆ ಒದಗಿಸುವಂತೆ ಸಚಿವ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ.



