ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪಕ್ಷಾಂತರ ಸುದ್ದಿ ಭಾರೀ ಸದ್ದು ಮಾಡುತ್ತಿದ್ದು, ಅದರಲ್ಲೂ ಮತ್ತೆ ಜೆಡಿಎಸ್ ನತ್ತ ಮುಖಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಮೀರ್, ನಾನು ಈಗಾಗಲೇ ಜೆಡಿಎಸ್ ಬಿಟ್ಟು ಬಂದವನು. ಮತ್ತೆ ಯಾಕೆ ಅಲ್ಲಿ ಹೋಗಲಿ? ಅದೆಲ್ಲವೂ ಕೇವಲ ಊಹಾಪೋಹ ಎಂದು ಸ್ಪಷ್ಟನೆ ನೀಡಿದ್ದಾರೆ.
ನನಗೆ ಕಾಂಗ್ರೆಸ್ ಎಂದಿಗೂ ಏನು ಕಡಿಮೆ ಮಾಡಲಿಲ್ಲ. ಕೇಳದೆ ಸಚಿವ ಸ್ಥಾನ ನೀಡಿದ್ದಾರೆ. ಪ್ರಮುಖ ಖಾತೆಗಳನ್ನೇ ವಹಿಸಿದ್ದಾರೆ. ಎಷ್ಟೆಲ್ಲಾ ಮಾಡಿದ ಕಾಂಗ್ರೆಸ್ ಬಿಟ್ಟು ನಾನು ಯಾಕೆ ಜೆಡಿಎಸ್ ಸೇರಲಿ ಎಂದು ಪ್ರಶ್ನಿಸಿದರು.
ಇತ್ತ ಕುಮಾರಸ್ವಾಮಿ ಜೊತೆ ರಹಸ್ಯ ಮಾತುಕತೆ ನಡೆದಿದೆ ಎಂಬ ವದಂತಿಗಳಿಗೂ ಉತ್ತರ ನೀಡಿದ ಜಮೀರ್, ಅಂತಹ ಅನಿವಾರ್ಯತೆ ನನಗಿಲ್ಲ. ನಾನು ಯಾರ ಜೊತೆ ಮಾತನಾಡಲು ಹೋಗಿಲ್ಲ. ಕಾಂಗ್ರೆಸ್ ನಲ್ಲಿ ಇದ್ದು ನನಗೆ ತೃಪ್ತಿ ಇದೆ. ಹಾಗಾಗಿ ಜೆಡಿಎಸ್ ಸೇರುವ ಯಾವ ಯೋಚನೆ ಮಾಡಿಲ್ಲ ಎಂದು ತಿಳಿಸಿದರು.



