ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆ ತನ್ನ ಪತಿಯೊಂದಿಗೆ ಮೋಟಾರ್ ಸೈಕಲ್ನಲ್ಲಿ ಹೋಗುತ್ತಿದ್ದ ವೇಳೆ ದುಪಟ್ಟಾ(ಉದ್ದನೆಯ ಸ್ಕಾರ್ಫ್) ಬೈಕ್ನ ಚಕ್ರಕ್ಕೆ ಸಿಕ್ಕಿಹಾಕಿಕೊಂಡಿದ್ದರಿಂದ ಕತ್ತು ಬಿಗಿದು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಮುಂಬೈ ನ ವಸಾಯಿಯ ಕಾಂಡಿವಲಿ ಪ್ರದೇಶದ ತುಂಗರೇಶ್ವರದಲ್ಲಿ ನಡೆದಿದೆ.
27 ವರ್ಷದ ಪ್ರತಿಮಾ ಯಾದವ್ ಮೃತಪಟ್ಟ ಮಹಿಳೆ. ಪ್ರತಿಮಾ ಇರಾನಿವಾಡಿ ಪ್ರದೇಶದ ಠಾಕೂರ್ ಚಾಲ್ನಲ್ಲಿ ವಾಸಿಸುತ್ತಿದ್ದರು.
ಮನೀಶ್ ಯಾದವ್ ಮತ್ತು ಪ್ರತಿಮಾ ಯಾದವ್ ದಂಪತಿ ಬುಲೆಟ್ ಮೋಟಾರ್ ಸೈಕಲ್ ನಲ್ಲಿ ಕಾಂಡಿವಲಿಯಿಂದ ವಸೈನಲ್ಲಿರುವ ತುಂಗರೇಶ್ವರ ಮಹಾದೇವ ದೇವಸ್ಥಾನಕ್ಕೆ ಹೋಗುವಾಗ ಘಟನೆ ನಡೆದಿದೆ.
ಮುಂಬೈ-ಅಹಮದಾಬಾದ್ ಹೆದ್ದಾರಿಯ ವಸಾಯಿ ಬಫಾನೆ ಬಳಿ ಪ್ರತಿಮಾ ಅವರ ಸ್ಕಾರ್ಫ್ ಬುಲೆಟ್ ಮೋಟಾರ್ ಸೈಕಲ್ನ ಹಿಂದಿನ ಚಕ್ರಕ್ಕೆ ಸಿಕ್ಕಿಹಾಕಿಕೊಂಡಿದ್ದರಿಂದ ದುರ್ಘಟನೆ ಸಂಭವಿಸಿದೆ. ಪ್ರತಿಮಾ ಕತ್ತಿಗೆ ಮತ್ತು ಚಕ್ರಕ್ಕೆ ದುಪಟ್ಟಾ ಸುತ್ತಿಕೊಂಡು ಬುಲೆಟ್ ನಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಆಕೆಯ ತಲೆಗೆ ಮಾರಣಾಂತಿಕ ಗಾಯಗಳಾಗಿವೆ. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.