ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಯಿಂದ ಹೊರಬರುವ ಮುನ್ನವೇ, ರಾಜಸ್ಥಾನದಲ್ಲಿ ಅಂತಹುದೇ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಾಪ್ಗಢ್ದಲ್ಲಿ 21ವರ್ಷದ ಮಹಿಳೆಯ ಮೇಲೆ ಹಲ್ಲೆ ನಡೆಸಿ, ವಿವಸ್ತ್ರವಗೊಳಿಸಿದ್ದಲ್ಲದೆ ಕುಟುಂಬಸ್ಥರೇ ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಮಹಿಳೆಯ ಮೇಲೆ ಆಕೆಯ ಪತಿ ಮತ್ತು ಆತನ ಸಹೋದರರು ಈ ದುಷ್ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ಸಹಾಯಕ್ಕಾಗಿ ಕಿರುಚಿಕೊಂಡರೂ ಯಾರೂ ರಕ್ಷಿಸಲಿಲ್ಲ. ಘಟನೆ ಬಗ್ಗೆ ದೂರು ದಾಖಲಿಸಿ, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಾಲಕಿ ಬೇರೆ ಗ್ರಾಮದಲ್ಲಿದ್ದಾಗ ಆಕೆಯ ಅತ್ತೆಯಂದಿರು ಆಕೆಯನ್ನು ಅಪಹರಿಸಿ ಸ್ವಗ್ರಾಮಕ್ಕೆ ಕರೆತಂದು ಈ ದುಷ್ಕೃತ್ಯ ಎಸಗಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ಘಟನೆಯನ್ನು ಖಂಡಿಸುವುದಾಗಿ ಮತ್ತು ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದಾಗಿ ಹೇಳಿದ್ದಾರೆ. ಯುವತಿಯನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಬಿಜೆಪಿ ನಾಯಕರು ಟೀಕಿಸಿದ್ದಾರೆ.
ʻರಾಜಸ್ಥಾನದ ಪ್ರತಾಪ್ಗಢ್ನಲ್ಲಿರುವ ವಿಡಿಯೋ ಆಘಾತಕಾರಿಯಾಗಿದೆ. ರಾಜಸ್ಥಾನದಲ್ಲಿ ಆಡಳಿತವು ಸಂಪೂರ್ಣವಾಗಿ ಹಾಳಾಗಿದೆ. ಸಿಎಂ ಮತ್ತು ಸಚಿವರು ಬಣ ಜಗಳ ಇತ್ಯರ್ಥ ಮಾಡುವಲ್ಲಿ ನಿರತರಾಗಿದ್ದು, ಇನ್ನುಳಿದ ಸಮಯ ದೆಹಲಿಯ ಒಂದೊಂದು ರಾಜವಂಶವನ್ನು ಸಮಾಧಾನಪಡಿಸುತ್ತಿದೆ. ಹೀಗಿರುವಾಗ ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ವಿಷಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಪ್ರತಿ ದಿನವೂ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ರಾಜಸ್ಥಾನದ ಜನತೆ, ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆʼ. ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹರಿಹಾಯ್ದರು.