ಹೊಸದಿಗಂತ ವರದಿ ಮೈಸೂರು:
ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತಕುಮಾರ ಹೆಗಡೆ ಅವರ ಸಂಬಂಧಿಕರು ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಮನೆಯ ಮಾಲೀಕರಿಂದ 7 ಲಕ್ಷ ರೂ ಸಾಲ ಪಡೆದು, ವಂಚಿಸಿ ಪರಾರಿಯಾಗಿರುವ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ನಡೆದಿದೆ.
ರೇಖಾ ಹೆಗಡೆ(32)ಎಂಬಾಕೆಯೇ ವಂಚಿಸಿದ ಮಹಿಳೆ. ಈಕೆ ಸುಧೀರ್ ಹಾಗೂ ಮಂಜುಳಾ ಅವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು.
ತನಗೆ ಅನಂತಕುಮಾರ್ ಹೆಗಡೆ ಪರಿಚಯ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಒಂದು ಕೋಟಿ ರೂ.ಮೌಲ್ಯದ ಮನೆಯನ್ನು ಖರೀದಿಸುತ್ತಿದ್ದು, ಅದಕ್ಕೆ ಮುಂಗಡ ಹಣ ನೀಡಲು ಏಳು ಲಕ್ಷ ರೂ.ಸಾಲವನ್ನು ಮಂಜುಳಾ ಅವರ ಬಳಿ ಪಡೆದಿದ್ದಾರೆ. ಆದರೆ ಹಣ ಪಡೆದ ನಂತರ ಮಹಿಳೆ ನಾಪತ್ತೆಯಾಗಿದ್ದಾಳೆ.
ಈ ಕುರಿತು ಅನಂತಕುಮಾರ್ ಹೆಗಡೆ ಅವರಲ್ಲಿ ವಿಚಾರಿಸಿದಾಗ ಆ ಮಹಿಳೆ ತನಗೆ ಗೊತ್ತಿಲ್ಲವೆಂದು ಹೇಳಿದ್ದಾರೆ. ಸಂಸದರು ಸಹ ಮಹಿಳೆಯ ವಿರುದ್ಧ ಶಿರಸಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ಮಂಜುಳಾ ಅವರಿಂದ ದೂರು ಪಡೆದು, ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.