ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ (Lok Sabha Election) ಬಿಜೆಪಿಯ ಅಭ್ಯರ್ಥಿಗಳ ಪರ ಕೆಲಸ ಮಾಡುವಂತೆ ಮಾಜಿ ಪ್ರಧಾನಿ ದೇವೇಗೌಡರು (Devegowda) ಜೆಡಿಎಸ್ ಶಾಸಕರು, ಮುಖಂಡರು, ನಾಯಕರು, ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಬಿಜೆಪಿ-ಜೆಡಿಎಸ್ (BJP-JDS) ಇಬ್ಬರು ಒಗ್ಗಟ್ಟಾಗಿದ್ದೇವೆ. ಕೋಲಾರ, ಮಂಡ್ಯ, ಹಾಸನ ನಮಗೆ ಕೊಟ್ಟಿದ್ದಾರೆ. ಉಳಿದ 25 ಕ್ಷೇತ್ರದಲ್ಲಿ ನೀವು ನಮ್ಮವರು ಬಿಜೆಪಿ ಚಿಹ್ನೆಗೆ ಮತ ಹಾಕಬೇಕು. ಚಾಚೂ ತಪ್ಪದೇ ಮತ ಹಾಕಬೇಕು. ಮರೆಯದೇ 25 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಕರೆ ಕೊಟ್ಟರು.
ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಹೋರಾಟ ಮಾಡುತ್ತಾರೆ. 3 ಜೆಡಿಎಸ್ ಕ್ಷೇತ್ರಕ್ಕೂ ಹೋರಾಟ ಮಾಡುತ್ತಾರೆ. ನಮ್ಮ ಅಳಿಯ ಮಂಜುನಾಥ್ (Dr. Manjunath) ಅವರನ್ನು ಬಿಜೆಪಿಯಿಂದ ನಿಲ್ಲಿಸಬೇಕು ಎಂದು ಕೇಂದ್ರದ ನಾಯಕರು ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿದರು.ಇವತ್ತು ಡಾ. ಮಂಜುನಾಥ್ ಒಪ್ಪಿಗೆ ಕೊಟ್ಟಿದ್ದಾರೆ ಎಂದರು.
ಡಾ.ಮಂಜುನಾಥ್ ರಾಜಕೀಯಕ್ಕೆ ಬರುವ ವ್ಯಕ್ತಿ ಅಲ್ಲ.ಇಡೀ ಇಂಡಿಯಾದಲ್ಲಿ 2 ಸಾವಿರ ಹೃದಯದ ರೋಗದ ಚಿಕಿತ್ಸೆ ಮಾಡುವ ಆಸ್ಪತ್ರೆ ಮಾಡಿದ್ದಾರೆ. ನನಗೆ ಈ ಬಗ್ಗೆ ಹೆಮ್ಮೆ ಇದೆ. ಖಾಸಗಿಯಲ್ಲೂ ಇಲ್ಲದ ಕೆಲಸ ಮಾಡಿ ಮಂಜುನಾಥ್ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಣ್ಣೀರು ಹಾಕಿದ ಬಡವನಿಗೆ ಡಾ. ಮಂಜುನಾಥ್ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ. ಹೀಗಾಗಿ ಮಂಜುನಾಥ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕೋಲಾರ, ಮಂಡ್ಯದಲ್ಲಿ ನಮ್ಮವರನ್ನು ಗೆಲ್ಲಿಸಿಕೊಂಡು ಬರಬೇಕು. ಮೈಸೂರಿನಿಂದ ರಾಜರು ನಿಂತಿದ್ದು ಅವರು ಒಳ್ಳೆಯ ವ್ಯಕ್ತಿ. ತುಮಕೂರಿನಿಂದ ಸೋಮಣ್ಣ ನಿಂತಿದ್ದಾರೆ. ಎಲ್ಲರೂ ಸಹಕಾರ ಕೊಡಬೇಕು ಎಂದು ಜೆಡಿಎಸ್ ನಾಯಕರಿಗೆ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.