ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಪ್ರಚಾರದಲ್ಲಿ ಎನ್ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಹೆಸರು ಹಾಗೂ ಚಿತ್ರವನ್ನು ಬಳಕೆ ಮಾಡಿಕೊಳ್ಳುತ್ತಿರುವ ವಿಚಾರದಲ್ಲಿ ಅಜಿತ್ ಪವಾರ್ ಬಣವನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನೆ ಮಾಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಈ ಕುರಿತು ಶನಿವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಅಜಿತ್ ಪವಾರ್ ಬಣಕ್ಕೆ ಸೂಚಿಸಿದ್ದು, ಪಕ್ಷದ ವಿಭಜನೆಯ ಹೊರತಾಗಿಯೂ ಶರದ್ ಪವಾರ್ ಅವರ ಚಿತ್ರವನ್ನು ಬಳಸುವುದನ್ನು ಮುಂದುವರಿಸುವುದರ ಹಿಂದಿನ ವಿಚಾರವೇನು ಎಂದು ಪ್ರಶ್ನೆ ಮಾಡಿದೆ.
ನೀವೀಗ ಭಿನ್ನ ರಾಜಕೀಯ ಪಕ್ಷ. ಅವರೊಂದಿಗೆ ಇರಬಾರದು ಎಂದು ನೀವು ತೀರ್ಮಾನ ಮಾಡಿದ್ದೀರಿ. ಹೀಗಿದ್ದಾಗ ಅವರ ಚಿತ್ರ ಹಾಗೂ ಹೆಸರನ್ನೇಕೆ ಬಳಸುತ್ತಿದ್ದೀರಿ. ನಿಮ್ಮದೇ ಹೊಸ ಗುರುತಿನೊಂದಿಗೆ ಚುನಾವಣೆಗೆ ಹೋಗಿ ಎಂದು ಪೀಠ ತಿಳಿಸಿದೆ.
ಶರದ್ ಪವಾರ್ ಅವರ ಹೆಸರು, ಚಿತ್ರಗಳನ್ನು ಬಳಸಲಾಗುವುದಿಲ್ಲ ಎಂದು ನಮಗೆ ನಿರ್ದಿಷ್ಟ ಮತ್ತು ಬೇಷರತ್ತಾದ ಒಪ್ಪಂದದ ಅಗತ್ಯವಿದೆ ಎಂದು ಪೀಠ ತಿಳಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 19 ರಂದು ನಡೆಸುವುದಾಗಿ ಕೋರ್ಟ್ ತಿಳಿಸಿದೆ.
ಅಜಿತ್ ಪವಾರ್ ಬಣ ಮತದಾರರನ್ನು ಓಲೈಸಲು ಶರದ್ ಪವಾರ್ ಅವರ ಹೆಸರು ಮತ್ತು ಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಶರದ್ ಪವಾರ್ ಗುಂಪು ಸಲ್ಲಿಸಿದ ಅರ್ಜಿಯನ್ನು ಅನುಸರಿಸಿ ಸುಪ್ರೀಂ ಕೋರ್ಟ್ ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.