ಹೊಸದಿಗಂತ ವರದಿ ಬಾಗಲಕೋಟೆ :
ಪ್ರತಿ ಮನೆ ಮನೆಗೆ ಹೋಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಿದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
ನಗಗರದ ವಾರ್ಡ್ 18ರಲ್ಲಿ ಬೂತ್ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಬೂತ್ ಮಟ್ಟದ ಪದಾಧಿಕಾರಿಗಳು ಕ್ರೀಯಾಶೀಲವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು. ಮತದಾರರ ಸೇರ್ಪಡೆ ಹಾಗೂ ಮತದಾನ ದಿನದಂದು ಶೇ.100ಕ್ಕೆ ನೂರರಷ್ಟು ಬೂತ್ ಗಳಲ್ಲಿ ಮತದಾನ ಆಗುವಂತೆ ಮಾಡಬೇಕು ಎಂದರು.
ಚುನಾವಣಾ ಬಿಎಲ್ಓ ಹಾಗೂ ಬೂತ್ ಮಟ್ಟದ ಮುಖಂಡರು ಸಂಪರ್ಕ ಇಟ್ಟುಕೊಂಡು ಮತದಾರರ ಸೇರ್ಪಡೆಗೆ ಕೈಜೋಡಿಸಬೇಕು ಎಂದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆ ಫಲಾನುಭವಿಗಳು ಇರುತ್ತಾರೆ, ಅವರಿಗೆ ಬಿಜೆಪಿ ಸರ್ಕಾರದ ಬಗ್ಗೆ ಮನವರಿಕೆ ಮಾಡುವ ಮೂಲಕ ಬಿಜೆಪಿ ಬೆಂಬಲಿಸಲು ಜಾಗೃತಿ ಮೂಡಿಸಬೇಕು ಎಂದರು.
ಪ್ರತಿ ಮನೆ ಮನೆಗೆ ಹಾಗೂ ವಾಹನಗಳಿಗೆ ಬಿಜೆಪಿ ಸ್ಟೀಕರ್ ಅಂಟಿಸಬೇಕು. ಅದಲ್ಲದೆ ಒತ್ತಾಯದಿಂದ ಹಚ್ಚಬಾರದು, ಅವರಿಗೆ ಮನವರಿಕೆ ಮಾಡಿ ಅಂಟಿಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಹಣಮಂತ ನಿರಾಣಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಇದ್ದರು.