ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃತಕ ಚೀನಾದ ಅಧಿಕಾರಿಗಳ ನಡುವೆ ಸಾಯುವುದಕ್ಕಿಂತ ಹೆಚ್ಚಾಗಿ ಭಾರತದ ಮುಕ್ತ ಪ್ರಜಾಪ್ರಭುತ್ವದಲ್ಲಿ ಸಾಯಲು ನಾನು ಬಯಸುತ್ತೇನೆ ಎಂದು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ದಶಕಗಳಿಂದ ನೆಲೆಸಿರುವ ದಲೈಲಾಮಾ, ತಮ್ಮ ನಿವಾಸದಲ್ಲಿಯು ಮುಖಂಡರೊಂದಿಗೆ ಎರಡು ದಿನಗಳ ಸಂವಾದವನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ.
ನನ್ನ ಸಾಯುವ ದಿನಗಳು ಬಂದಾಗ, ಭಾರತದಲ್ಲೇ ನಾನು ಸಾಯಲು ಇಷ್ಟಪಡುತ್ತೇನೆ. ಭಾರತ ಪ್ರೀತಿಯನ್ನು ತೋರುವ ಜನರಿಂದ ತುಂಬಿದೆ. ಇಲ್ಲಿ ಕೃತಕತೆಗಳಿಲ್ಲ. ಹಾಗೇನಾದರೂ ನಾನು ಚೀನಾದ ಅಧಿಕಾರಿಗಳ ಎದುರು ಸಾವು ಕಂಡಲ್ಲಿ, ಬಹುಶಃ ನನ್ನ ಸಾವು ಕೂಡ ಕೃತಕವಾಗಿರುತ್ತದೆ.ಸ್ವತಂತ್ರ ಹಾಗೂ ಮುಕ್ತ ಪ್ರಜಾಪ್ರಭುತ್ವವಿರುವ ಈ ದೇಶದಲ್ಲಿ ಸಾಯುವುದನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಸಾವಿನ ಸಮಯದಲ್ಲಿ, ನಮ್ಮ ಸಾವಿಗೆ ನಿಜವಾದ ಭಾವನೆಗಳನ್ನು ತೋರಿಸುವ ವಿಶ್ವಾಸಾರ್ಹ ಸ್ನೇಹಿತರಿಂದ ಸುತ್ತುವರಿದಿರಬೇಕು ಎಂದು ಅವರು ಹೇಳಿದ್ದಾರೆ.
ಭಾರತದ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಎದುರೇ ತಾವು ಈ ಮಾತನ್ನು ಹೇಳಿದ್ದೆ ಎಂದು ದಲೈಲಾಮಾ ಹೇಳಿದ್ದಾರೆ. ನಾನು ಇನ್ನೊಂದಷ್ಟು 15-20 ವರ್ಷ ಬದುಕಿರಬಹುದು. ಆರೆ, ಸಾವು ಯಾವಾಗ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ, ನನ್ನ ಸಾವು ಭಾರತದಂಥ ದೇಶದಲ್ಲಿ ಆಗಬೇಕು ಎನ್ನುವುದು ಆಸೆ ಎಂದು ಹೇಳಿದ್ದೆ ಎಂದರು.
ದಲೈ ಲಾಮಾ ಅವರು ತಮ್ಮ ಆಧ್ಯಾತ್ಮಿಕ ಶ್ರೀಮಂತಿಕೆಯ ಕಾರಣದಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ. ಅದಲ್ಲದೆ, ಅವರು ಟಿಬೆಟಿಯನ್ನರ ಅತಿದೊಡ್ಡ ರಾಜಕೀಯ ಪ್ರತಿನಿಧಿಯೂ ಆಗಿದ್ದಾರೆ. ಚೀನಾ ಸರ್ಕಾರವು ದಲೈ ಲಾಮಾ ಅವರನ್ನು ವಿವಾದಾತ್ಮಕ ಮತ್ತು ಪ್ರತ್ಯೇಕತಾವಾದಿ ಎಂದು ಬಣ್ಣಿಸುತ್ತದೆ. ಮತ್ತೊಂದೆಡೆ, ದಲೈ ಲಾಮಾ ಅನೇಕ ಸಂದರ್ಭಗಳಲ್ಲಿ ಚೀನಾದ ನೀತಿಗಳನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ.