ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಕ್ಷಗಾನ ಕಲಾವಿದ ಕೀರ್ತನ್ ಶೆಟ್ಟಿ ವಗೆನಾಡು(38) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆಯ ಇರಾ ಗ್ರಾಮದ ಮೂಳೂರಿನಲ್ಲಿ ಶುಕ್ರವಾರ ನಡೆದಿದೆ.
ಯಕ್ಷಗಾನದಲ್ಲಿ ಹಿಮ್ಮೇಳ ( ಭಾಗವತ) ಕಲಾವಿದನಾಗಿದ್ದ ಅವರು ಬಪ್ಪನಾಡು ಹಾಗೂ ಇತರ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕೊರೋನಾ ಬಳಿಕ ಚಿಕ್ಕಮೇಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಸಾಲೆತ್ತೂರಿನಲ್ಲಿ ವಾಸವಾಗಿದ್ದ ಇವರ ಕುಟುಂಬ ಇತ್ತೀಚಿನ ಮೂರು ವರ್ಷದಿಂದ ಇರಾ ಗ್ರಾಮದ ಪರಪುವಿನಲ್ಲಿ ವಾಸವಾಗಿದ್ದರು. ವಿವಾಹಿತರಾಗಿದ್ದ ಇವರಿಗೆ ಪತ್ನಿ, ಅವಳಿ ಜವಳಿ ಮಕ್ಕಳು, ತಂದೆ, ತಾಯಿ, ತಮ್ಮ ಇದ್ದಾರೆ.
ಮೂಳೂರಿನ ಕಾಂಪ್ಲಕ್ಸ್ ನ ಬಾಡಿಗೆ ಕೊಠಡಿಯಲ್ಲಿ ಶುಕ್ರವಾರ ಇವರು ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕೊಣಾಜೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.