ಹೊಸ ದಿಗಂತ ವರದಿ, ಮೂಲ್ಕಿ:
ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ನೀಡಲ್ಪಡುವ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಯನ್ನು ಯಕ್ಷಗಾನ ಪ್ರಸಂಗಕರ್ತ, ಗುರುಗಳಾದ ಗಣೇಶ ಕೊಲೆಕಾಡಿ ಅವರಿಗೆ ಶನಿವಾರ ಮುಲ್ಕಿ ಕೊಲೆಕಾಡಿಯ ಅವರ ಮನೆಯಲ್ಲಿ ಪ್ರದಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಒಂದು ಲಕ್ಷ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿತ್ತು.
ಈ ವೇಳೆ ಮಾತನಾಡಿದ ಸಚಿವ ಸುನಿಲ್ ಕುಮಾರ್, ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗುವ ಬದಲು ಪ್ರಶಸ್ತಿಯೇ ನಮ್ಮನ್ನು ಅರಸಿಕೊಂಡು ಬರಬೇಕು, ಈ ನಿಟ್ಟಿನಲ್ಲಿ ಗಣೇಶ್ ಕೊಲಕಾಡಿಯವರನ್ನು ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಅಭಿನಂದನೀಯ ಎಂದರು.
ಪಾರ್ತಿಸುಬ್ಬ ಪ್ರಶಸ್ತಿ ಯಕ್ಷಗಾನ ಆಕಾಡಮಿಯಿಂದ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಆಕಾಡಮಿ ಗಣೇಶ್ ಕೊಲಕಾಡಿಯವರನ್ನು ಗುರುತಿಸಿದ್ದು ಅಭಿನಂದನೀಯ, ನಾಳೆ ಕಮಲಶಿಲೆಯಲ್ಲಿ ಪ್ರಶಸ್ತಿ ಪ್ರಧಾನ ನಡೆಯಲ್ಲಿದ್ದು ಗಣೇಶ್ ಅವರ ಅನಾರೋಗ್ಯದ ಕಾರಣ ಅವರ ಮನೆಯಗೆ ಬಂದು ಪ್ರಶಸ್ತಿ ನೀಡುತ್ತಿದ್ದೇವೆ ಎಂದರು.
ಈ ಸಂದರ್ಭ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಯಕ್ಷಗಾನ ಆಕಾಡಮಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ, ಸದಸ್ಯರಾದ , ಮಾಧವ ಭಂಡಾರಿ, ಕದ್ರಿ ನವನೀತ ಶೆಟ್ಟಿ, ಶ್ರೀನಿವಾಸ ಸಾಸ್ತಾನ, ಕೆ.ಎಂ. ಶೇಖರ, , ಯೋಗೀಶ ರಾವ್ ಚಿಗುರುಪಾದೆ ಎಂ. ದಾಮೋದರ ಶೆಟ್ಟ, ಎಸ್.ಹೆಚ್.ಶಿವರುದ್ರಪ್ಪ, ಅತಿಕಾರಿಬೆಟ್ಟು ಪಂಚಾಯತ್ ಅಧ್ಯಕ್ಷ ಮನೋಹರ್ ಕೋಟ್ಯಾನ್, ವಿಜಯ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಅಳ್ವ, ಕಿಲ್ಪಾಡಿ ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ ಪಡಂಗ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಗಾನ ಆಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಸಚಿವ ಸುನೀಲ್ ಕುಮಾರ್ ಅವರು ಕೊಲಕಾಡಿಯವರಿಗೆ ವೈಯಕ್ತಿಕ 1 ಲಕ್ಷ ರೂಪಾಯಿ ಸಹಾಯ ಧನ ನೀಡಿದರು.