ಹೊಸದಿಗಂತ, ಬೆಂಗಳೂರು:
ಶನಿವಾರ ನಗರದ ಲಾಲ್ ಬಾಗಿನಲ್ಲಿ ಸಂಚಾರ ಪೊಲೀಸರು ಜಾಗೃತಿ ಅಭಿಯಾನ ನಡೆಸಿದರು. ಈ ವೇಳೆ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂದು ಪೊಲೀಸರು ಅರಿವು ಮೂಡಿಸಿದರು. ತಮಟೆ ಸದ್ದು, ಯಮ ಕಿಂಕರನ ಅರ್ಭಟಕ್ಕೆ ಸಾರ್ವಜನಿಕರು ಸುಸ್ತಾದರು.
ಅಪಘಾತವಾದರೂ ತಲೆಗೆ ಹೆಚ್ಚಿನ ಏಟಾಗಬಾರದು ಎನ್ನುವ ಕಾರಣಕ್ಕೆ ಹೆಲ್ಮೆಟ್ ಧರಿಸಬೇಕು ಎಂದು ಕಾನೂನು ತರಲಾಗಿದೆ. ಆದರೆ, ಜನರು ದಂಡ ತಪ್ಪಿಸುವುದಕ್ಕಾಗಿ ಮಾತ್ರ ಹಾಫ್ ಹೆಲ್ಮೆಟ್ ಹಾಕಿ ಸಂಚರಿಸುತ್ತಾರೆ. ಹಾಫ್ ಹೆಲ್ಮೆಟ್ ಪ್ರಾಣಕ್ಕೆ ಕುತ್ತು ತರುವುದರಿಂದ, ಅಂತಹ ಹೆಲ್ಮೆಟ್ ಧರಿಸಿದರೂ ದಂಡ ಬೀಳುತ್ತದೆ.
ಹಾಫ್ ಹೆಲ್ಮೆಟ್ ಧರಿಸಿ ಹಾಗೂ ಹೆಲ್ಮೆಟ್ ಧರಿಸದೇ ಬಂದ ವಾಹನ ಸವಾರರಿಗೆ ಯಮ ಕಿಂಕರನಿಂದ ಪಾಠ ನಡೆಯಿತು. ನೀಚ ನಮ್ಮ ಕೈಗೆ ಸಿಗಬೇಡ, ಸಿಕ್ಕರೆ ಮುಗಿಯುತ್ತೆ ನಿನ್ನ ಕಥೆ ಹ್ಹ..ಹ್ಹ.. ಎಂದು ವಾಹನ ಸವಾರರಿಗೆ ಎಚ್ಚರಿಕೆ ಕೊಟ್ಟಿದ್ದಾನೆ. ಜೊತೆಗೆ, ಸಾರ್ವಜನಿಕರು ಸಂಚಾರ ನಿಮಯ ಪಾಲಿಸಿ, ಜೀವ ಉಳಿಸಿಕೊಳ್ಳಿ ಎಂದು ಹೇಳುತ್ತಿದ್ದಾನೆ.
ಲಾಲ್ ಬಾಗ್ ನ ಪುಷ್ಪ ಪ್ರದರ್ಶನಕ್ಕೆ ಬಂದವರಿಗೂ ಹೆಲ್ಮೆಟ್, ಸಂಚಾರ ನಿಯಮಗಳ ಬಗ್ಗೆ ಸೂಚನೆ ನೀಡಲಾಯಿತು. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸರು ಈ ಅಭಿಯಾನ ಅಯೋಜಿಸಿದ್ದರು.