ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರದ ಮೂರು ತಾಲೂಕುಗಳ ಜನರ ಕನಸು ಇಂದು ನನಸಾಗಿದೆ. ಹದಿನೇಳು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯರಗೋಳ್ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಸಿಎಂಗೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಬೈರತಿ ಸುರೇಶ್ ಸೇರಿದಂತೆ ಹಲವು ಶಾಸಕರುಗಳು ಸಾಥ್ ನೀಡಿದರು.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಗ್ರಾಮದ ಬಳಿ ನಿರ್ಮಿಸಲಾಗಿರುವ ಈ ಡ್ಯಾಂ, ಕೋಲಾರ, ಬಂಗಾರಪೇಟೆ, ಮಾಲೂರು ತಾಲೂಕು ಹಾಗೂ 45ಗ್ರಾಮಗಳ ಜನರಿಗೆ ಕುಡಿಯುವ ಶುದ್ಧ ನೀರನ್ನು ಪೂರೈಕೆ ಮಾಡುತ್ತದೆ. ಅತಿ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಯರಗೋಳು ಮೂಲಕ ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ನೀರಿಗೆ ಅಡ್ಡಲಾಗಿ ಈ ಡ್ಯಾಂ ನಿರ್ಮಿಸಲಾಗಿದೆ.
ಈ ಡ್ಯಾಂ ನಿರ್ಮಾಣಕ್ಕೆ 314 ಕೋಟಿ ರೂಪಾಯಿ ಖರ್ಚಾಗಿದ್ದು, ಡ್ಯಾಂನಲ್ಲಿ 500 MCFT ಸಾಮರ್ಥ್ಯದ ನೀರು ಶೇಖರಣೆಯಾಗಲಿದೆ.