ಹೊಸದಿಗಂತ ಡಿಜಿಟಲ್ ಡೆಸ್ಕ್
ದೃಗ್ಗಣಿತರೀತ್ಯಾ ಪಂಚಾಂಗವನ್ನು ತಯಾರಿಸಿ ಧರ್ಮಕರ್ಮಗಳಿಗೆ ಕಾಲನಿರ್ಣಯವನ್ನು ಮಾಡಿಕೊಂಡು ಬರುತ್ತಿರುವ 108 ವರ್ಷಗಳ ಇತಿಹಾಸವುಳ್ಳ ವೈಜಯಂತೀ ಪಂಚಾಂಗದ ಸಂಪಾದಕರಾದ ಯರ್ಮುಂಜ ಶಂಕರ ಜೋಯಿಸರು (72) ಪುತ್ತೂರಿನ ಅಂಗರಜೆಯ ಸ್ವಗೃಹದಲ್ಲಿ ಫೆ. ೮ ಶನಿವಾರದಂದು ನಿಧನರಾಗಿದ್ದಾರೆ.
ಯರ್ಮುಂಜ ಭೀಮ ಜೋಯಿಸರ ಮಗನಾದ ಶಂಕರ ಅವರು ವೈಜಯಂತೀ ಪಂಚಾಂಗದ ಆದ್ಯಪ್ರವರ್ತಕರಾದ ಯರ್ಮುಂಜ ಶಂಕರ ಜೋಯಿಸರ ಮೊಮ್ಮಗ.
ಧರ್ಮಶಾಸ್ತ್ರದಲ್ಲಿಯೂ ಅವರ ಪಾಂಡಿತ್ಯವು ಅಗಾಧವಾಗಿತ್ತು. ಹಲವು ಜೌತಿಷ ವಿದ್ವತ್ ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿರುವ ಅವರು ವಾಸ್ತುಪ್ರಕಾರ ಅನೇಕ ಗೃಹನಿರ್ಮಾಣಕ್ಕೆ ಮಾರ್ಗದರ್ಶನವನ್ನು ನೀಡುತ್ತಿದ್ದರು.
ಅವರಿಗೆ ಬೈಲೂರು ಅನಂತಪದ್ಮನಾಭ ತಂತ್ರಿ ಸಂಸ್ಮರಣಾ ಪ್ರಶಸ್ತಿ(2O18), ಪೋಳ್ಯ ಲ. ವೆಂ. ಮಠ-ತತ್ತ್ವ ಧರ್ಮ ಸಭಾ-ಸನ್ಮಾನ ಪತ್ರ(2019), ಮಿತ್ತೂರು ಸಂಪ್ರತಿಷ್ಠಾನ- ವಿದ್ವತ್ ಪ್ರಶಸ್ತಿ(2019),ಕಿಳಿಂಗಾರು ವಸಿಷ್ಠ ಪ್ರಶಸ್ತಿ 2022 ಮುಂತಾದ ಪ್ರಶಸ್ತಿ ಗಳು ಅರಸಿ ಬಂದಿದೆ.
ಅವರು ಉಡುಪಿಯ ಪುತ್ತಿಗೆ ಮಠದ ಮುಖ್ಯ ಪ್ರಾಣ ಶ್ರೀಕೃಷ್ಣ ಪಂಚಾಂಗಕ್ಕೆ ಗಣಿತ, ಸುಪ್ರಸಿದ್ಧ ಶಾರದಾ, ಹೊಸ ದಿಗಂತ, ಬೆಂಗಳೂರು ಮುದ್ರಣಾಲಯ, ಪ್ರಜಾವಾಣಿ ಇತ್ಯಾದಿ ಹತ್ತು ಹಲವು ಕ್ಯಾಲೆಂಡರ್ ಹಾಗೂ ಡೈರಿಗಳಿಗೆ ಸಂಪೂರ್ಣ ಪಂಚಾಂಗ ಮಾಹಿತಿಗಳನ್ನು ನೀಡುತ್ತಿದ್ದರು.