ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರತದಲ್ಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ. ಆದರೆ ಇದೀಗ ಯೋಗಿ ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿಯಾಗಿ ಮಾತ್ರ ದೇವರಾಗಿದ್ದಾರೆ.
ಹೌದು, ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಿಂದ 25 ಕಿಲೋಮೀಟರ್ ದೂರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ಗಾಗಿ ದೇವಸ್ಥಾನ ನಿರ್ಮಾಣಗೊಂಡಿದೆ. ಯೋಗಿ ಬಾಬಾ ಮಂದಿರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಕೇಸರಿ ಉಡುಪಿನಲ್ಲಿರುವ ಯೋಗಿ ಆದಿತ್ಯನಾಥ್ ಶ್ರೀರಾಮ ಚಂದ್ರನಂತೆ ಬಿಲ್ಲು, ಬತ್ತಳಿಕೆ ಹಿಡಿದು ಬರುತ್ತಿರುವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಯಾಗ್ರಾಜ್ ಆಯೋಧ್ಯ ಹೆದ್ದಾರಿಯಲ್ಲಿ ಬಳಿ ಬರುವ ಭರತ್ ಕುಂಡದ ಸಮೀದಲ್ಲಿರುವ ಭದರಸಾ ಗ್ರಾಮದಲ್ಲಿ ಈ ದೇವಸ್ಥಾನ ಕಟ್ಟಲಾಗಿದೆ.
ಯೋಗಿ ಆಡಳಿತದಲ್ಲಿ ಉತ್ತರ ಪ್ರದೇಶ ಅಭಿವೃದ್ಧಿ ಕಂಡಿದೆ. ಇಷ್ಟು ಮಾತ್ರವಲ್ಲ ಹಿಂದುತ್ವ ನಳನಳಿಸುತ್ತಿದೆ. ಸ್ವಾತಂತ್ರ್ಯ ಬಂದ ನಂತರ ಯಾವ ಸರ್ಕಾರವಕ್ಕೂ ಸಾಧ್ಯವಾಗದ ರಾಮ ಮಂದಿರ ನಿರ್ಮಾಣವೂ ಆಗುತ್ತಿದೆ. ಹೀಗಾಗಿ ಯೋಗಿ ಆದಿತ್ಯನಾಥ್ ನಮ್ಮ ಪಾಲಿಗೆ ದೇವರು ಎಂದು ದೇವಸ್ಥಾನ ಕಟ್ಟಿಸಿದ ಭಕ್ತ ಪ್ರಭಾಕರ್ ಮೌರ್ಯ ಹೇಳಿದ್ದಾರೆ.
ಹಿಂದೂಗಳ ಬೇಡಿಕೆಯನ್ನು ಯೋಗಿ ಆದಿತ್ಯನಾಥ್ ಪೂರೈಸಿದ್ದಾರೆ. ಶ್ರೀರಾಮ ಮಂದಿರ ನಿರ್ಮಾಣ ಭಾರತೀಯ ಹಿಂದೂಗಳ ಬೇಡಿಕೆಯಾಗಿತ್ತು. ಇದು ಹಿಂದೂಗಳ ಹಕ್ಕೂ ಕೂಡ ಆಗಿತ್ತು. ಶ್ರೀರಾಮ ಮಂದಿರ ನಿರ್ಮಾಣಕ್ಕಿದ್ದ ತೊಡಕು ನಿವಾರಿಸಿ ದೇವಸ್ಥಾನ ಕಟ್ಟಲಾಗುತ್ತಿದೆ. ಶ್ರೀರಾಮ ಮಂದಿರ ಕಟ್ಟಿಸುತ್ತಿರುವ ಯೋಗಿ ಆದಿತ್ಯನಾಥ್ಗೆ ಒಂದು ದೇವಸ್ಥಾನ ಬೇಕು. ಇದಕ್ಕೆ ಯೋಗಿ ಆದಿತ್ಯನಾಥ್ ಅರ್ಹರಾಗಿದ್ದಾರೆ ಎಂದು ಪ್ರಭಾಕರ್ ಮೌರ್ಯ ಹೇಳಿದ್ದಾರೆ.
ಯೋಗಿ ಬಾಬಾ ಮಂದಿರ
ಸುಂದರ ಪರಿಸರದಲ್ಲಿ ಯೋಗಿ ಬಾಬಾ ಮಂದಿರ ನಿರ್ಮಾಣಗೊಂಡಿದೆ. ಪ್ರತಿ ದಿನ ಸಂಜೆ ಇಲ್ಲಿ ಯೋಗಿ ಆದಿತ್ಯನಾಥ್ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಈ ಮಂದಿರ ವಿಚಾರ ತಿಳಿದು ಇದೀಗ ಇತರ ಗ್ರಾಮಗಳಿಂದ, ಬೇರೆ ಜಿಲ್ಲೆಗಳಿಂದ ಹಲವರು ಆಗಮಿಸುತ್ತಿದ್ದಾರೆ. ಮಂದಿರ ಭೇಟಿ ನೀಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ಪೂಜ್ಯಭಾವದಿಂದ, ದೇವರಾಗಿ ನೋಡುವವರು ಮಾತ್ರ ಈ ದೇವಸ್ಥಾನಕ್ಕೆ ಆಗಮಿಸದರೆ ಸಾಕು ಎಂದು ಪ್ರಭಾಕರ್ ಮೌರ್ಯ ಮನವಿ ಮಾಡಿದ್ದಾರೆ.