ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ, ಮೇ 17 ರಂದು ಉತ್ತರ ಪ್ರದೇಶ ಸರ್ಕಾರವು ತನ್ನ ಅನುದಾನ ಪಟ್ಟಿಯಿಂದ ಹೊಸ ಮದರಸಾಗಳನ್ನು ಹೊರಗಿಡುವ ಪ್ರಸ್ತಾಪವನ್ನು ಅಂಗೀಕರಿಸಿದೆ. ಅಖಿಲೇಶ್ ಯಾದವ್ ಸರ್ಕಾರದ ನೀತಿಗೆ ಅಂತ್ಯ ಹಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಂಪುಟ ಈಗ ಹೊಸ ಮದರಸಾಗಳಿಗೆ ಸರ್ಕಾರದಿಂದ ಯಾವುದೇ ಅನುದಾನವನ್ನು ನೀಡದಿರಲು ನಿರ್ಧಾರ ಮಾಡಿದೆ.
ತನ್ನ ಕೊನೆಯ ಬಜೆಟ್ನಲ್ಲಿ, ಯುಪಿ ಸರ್ಕಾರವು ಮದರಸಾ ಆಧುನೀಕರಣ ಯೋಜನೆಯಡಿಯಲ್ಲಿ 479 ಕೋಟಿ ರೂ.ಗಳನ್ನು ವಿನಿಯೋಗಿಸಿತ್ತು, ರಾಜ್ಯದಲ್ಲಿ ಒಟ್ಟು 16,000 ನೋಂದಾಯಿತ ಮದರಸಾಗಳ 558 ಸಂಸ್ಥೆಗಳಿಗೆ ಹಣವನ್ನು ಮಂಜೂರು ಮಾಡಿದೆ.
ಒಂದು ವಾರದೊಳಗೆ ಹೊಸ ಮದರಸಾಗಳಿಗೆ ಧನಸಹಾಯವನ್ನು ನಿಲ್ಲಿಸುವ ನಿರ್ಧಾರ ಉತ್ತರ ಪ್ರದೇಶದಲ್ಲಿ ಜಾರಿಗೆ ಬರಲಿದೆ. ರಾಜ್ಯದ ಮದರಸಾಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತರಗತಿಗಳನ್ನು ಪ್ರಾರಂಭಿಸುವ ಮೊದಲು ರಾಷ್ಟ್ರಗೀತೆಯನ್ನು ಹಾಡುವ ಆದೇಶ ಮೇ 12ರಿಂದ ಜಾರಿಗೆ ಬಂದಿದೆ.
ಮಾರ್ಚ್ 24 ರಂದು ನಡೆದ ಯುಪಿ ಮದ್ರಸಾ ಶಿಕ್ಷಣ ಮಂಡಳಿಯ ಸಭೆಯಲ್ಲಿ ಉತ್ತರ ಪ್ರದೇಶದ ಅಲ್ಪಸಂಖ್ಯಾತ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಅವರು ಈ ಆದೇಶ ಹೊರಡಿಸಿದ್ದಾರೆ.