ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭಾ ಚುನಾವಣಾ ಅಖಾಡ ಕಾವೇರುತ್ತಿದ್ದು, ಕೇಂದ್ರ ಸರಕಾರ, ಬಿಜೆಪಿ ವಿರುದ್ಧ ಸಿಎಂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ಮುಂದುವರಿಸಿದ್ದಾರೆ.
ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಮೂಲಕ ಕೇಂದ್ರ ಸರಕಾರ ಅನೇಕ ಜನರ ಮತದಾನದ ಹಕ್ಕನ್ನು ಕಿತ್ತುಗೊಂಡಿದೆ. ಈ ಮೂಲಕ ಬಂಗಾಳದಿಂದ ಅವರನ್ನು ಹೊರಗಿಡುವ ಯತ್ನ ನಡೆಯುತ್ತಿದೆ. ಇಂತಹ ಕೃತ್ಯ ನಡೆಸುತ್ತಿರುವ ಪ್ರಧಾನಿ ಮತ್ತು ಬಿಜೆಪಿಗರು ಅತಿದೊಡ್ಡ ನುಸುಳುಕೋರರು ಎಂದು ಟೀಕಿಸಿದ್ದಾರೆ.
ಕೋಲ್ಕತ್ತಾದ ರೆಡ್ ರೋಡ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ದರೋಡೆಕೋರರು, ಗೂಂಡಾಗಳ ಪಕ್ಷ. ಚುನಾವಣೆ ನಡೆಯುವ ರಾಜ್ಯಗಳಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಿಸುವ ಮೂಲಕ ಸರಕಾರವನ್ನು ವಶಪಡಿಸಲು ಯತ್ನಿಸುತ್ತಿದೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ. ಅಂತಿಮ ನಿರ್ಧಾರ ಆಗುವುದು ಜನರಿಂದಲೇ ಎಂದು ಹೇಳಿದರು.
ನಾನು ಸದಾ ಬಂಗಾಳದ ಜನರ ಪರ. ಇಲ್ಲಿನ ಜನರ ಒಳಿತಿಗಾಗಿ ನಾನು ಯಾವುದೇ ಜಾತಿ, ಬೇಧ ಮಾಡದೇ ಜೊತೆಯಾಗಿ ನಿಲ್ಲುತೇನೆ ಎಂದು ಭರವಸೆ ನೀಡಿದರು.
ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ದೇಶದ ಪ್ರಧಾನಿಯನ್ನು ನುಸುಳುಕೋರ ಎಂದು ಕರೆದ ಮಮತಾ ಸಾಂವಿಧಾನಿಕ ಹುದ್ದೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಶಿಶಿರ್ ಬಜೋರಿಯಾ ಕಿಡಿಕಾರಿದ್ದಾರೆ.



