ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರ್ವಜನಿಕ ಜೀವನದಲ್ಲಿರುವ ನ್ಯಾಯಾಧೀಶರು ಸೇರಿದಂತೆ ರಾಜಕಾರಣಿಗಳು ಸಹ ದಪ್ಪ ಚರ್ಮದವರಾಗಿರಬೇಕು ಎಂದು ದೆಹಲಿ ಹೈಕೋರ್ಟ್ (Delhi High Court) ಬುಧವಾರ ಅಭಿಪ್ರಾಯಪಟ್ಟಿದೆ.
ಹಿಂದಿ ಪತ್ರಿಕೆಯ ವಿರುದ್ಧ ಈಸ್ಟ್ ದಿಲ್ಲಿ ಸಂಸದ , ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಆ ಪ್ರಕರಣ ವಿಚಾರಣೆ ವೇಳೆ ಕೋರ್ಟ್ ಅಭಿಪ್ರಾಯಪಟ್ಟಿದೆ.
ಮಧ್ಯಂತರ ತಡೆ ಕೋರಿದ್ದ ಗೌತಮ್ ಗಂಭೀರ್ ಅವರ ಕೋರಿಕೆಯನ್ನು ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ನಿರಾಕರಿಸಿದರು. ಸಂಪೂರ್ಣ ಸುರಕ್ಷತೆಯನ್ನು ಒದಗಿಸಲು ಸಾಧ್ಯವಿಲ್ಲ ಎಂದ ಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಪಂಜಾಬ್ ಕೇಸರಿ ಪತ್ರಿಕೆಯ ಸಂಪಾದಕ ಹಾಗೂ ವರದಿಗಾರರಿಗೆ ನೋಟಿಸ್ ಜಾರಿ ಮಾಡಿತು.
ಗೌತಮ್ ಗಂಭೀರ್ ಜಾತಿವಾದಿ ಹಾಗೂ ತಂಟೆಕೋರ ರಾಜಕಾರಣಿ ಎಂದು ತಮ್ಮ ಸರಣಿ ಲೇಖನಗಳಲ್ಲಿ ಅವಮಾನ ಮಾಡಿದ್ದಾರೆಂದು ಪಂಜಾಬ್ ಕೇಸರಿ ಪತ್ರಿಕೆ ವಿರುದ್ದ ಗೌತಮ್ ಗಂಭೀರ್ ಅವರು 2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಗೌತಮ್ ಗಂಭೀರ್ ಅವರ ಪರವಾಗಿ ಜೈ ಅನಂತ್ ದೇಹದ್ರಾಯಿ ಅವರು ವಾದವನ್ನು ಆಲಿಸಿದ ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಅವರು, ನೀವೊಬ್ಬ ಸಾರ್ವಜನಿಕ ವ್ಯಕ್ತಿ ಮತ್ತು ಚುನಾಯಿತ ಪ್ರತಿನಿಧಿಯಾಗಿದ್ದೀರಿ. ಹಾಗಾಗಿ, ತೀರಾ ಅಷ್ಟೊಂದು ಸೂಕ್ಷ್ಮ ವ್ಯಕ್ತಿಯಾಗುವ ಅಗತ್ಯವಿಲ್ಲ. ಸೋಷಿಯಲ್ ಮೀಡಿಯಾ ಜಮಾನದಲ್ಲಿ ಸಾರ್ವಜನಿಕ ಜೀವನದಲ್ಲಿರುವವರು ದಪ್ಪ ಚರ್ಮದವರಾಗಿರಬೇಕಾದ ಅಗತ್ಯವಿದೆ. ಇದಕ್ಕೆ ಜಡ್ಜ್ ಕೂಡ ಹೊರತಲ್ಲ ಎಂದು ಅವರು ಹೇಳಿದರು.