ಹೊಸದಿಂತ ವರದಿ,ನಾಗಮಂಗಲ :
ಮರದಲ್ಲಿ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ತಗುಲಿ ಯುವ ರೈತನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಕೂಚಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಗ್ರಾಮದ ನಂಜೇಗೌಡರ ಪುತ್ರ ಕೆ.ಎನ್.ಶರತ್ಗೌಡ(26) ಎಂಬುವರೇ ಘಟನೆಯಲ್ಲಿ ಮೃತಪಟ್ಟಿರುವ ನತದೃಷ್ಟ ಯುವಕನಾಗಿದ್ದು, ಭಾನುವಾರ ಬೆಳಿಗ್ಗೆ ತಮ್ಮ ಜಮೀನಿನ ತೆಂಗಿನಮರದಲ್ಲಿ ದೋಟಿ ಮೂಲಕ ಕಾಯಿ ಕೀಳುತ್ತಿದ್ದ ವೇಳೆ ಮರದ ಪಕ್ಕದಲ್ಲೇ ಹಾಯ್ದು ಹೋಗಿದ್ದ 11ಕೆವಿ ಸಾಮರ್ಥ್ಯದ ವಿದ್ಯುತ್ ಸ್ಪರ್ಷಿಸಿ ಈ ಅವಘಡ ಸಂಭವಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೋಷಕರು ಮತ್ತು ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ಕೊಟ್ಟ ಬಿಂಡಿಗನವಿಲೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಶರತ್ಗೌಡನ ಮೃತದೇಹವನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು. ಪೋಷಕರು ನೀಡಿರುವ ದೂರಿನ್ವಯ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶರತ್ಗೌಡನ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.