ಹೊಸದಿಗಂತ ವರದಿ ಮಡಿಕೇರಿ:
ವೀರಾಜಪೇಟೆಯ ಬಂಗಾಳಿ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೋಣಿಕೊಪ್ಪಲುವಿನ ಖಾಸಗಿ ಸುದ್ದಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದೀಕ್ಷಿತಾ (21) ಮೃತ ದುರ್ದೈವಿಯಾಗಿದ್ದಾರೆ.
ಮೂಲತಃ ವೀರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿಯ ಕುಟ್ಟಂದಿ ಗ್ರಾಮದ ನಿವಾಸಿಯಾಗಿದ್ದು, ಪ್ರಸಕ್ತ ವೀರಾಜಪೇಟೆ ಪಟ್ಟಣದ ಬಂಗಾಳಿ ಬೀದಿಯ ಕಾವೇರಿ ಕಲ್ಯಾಣ ಮಂಟಪದ ಸನಿಹ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಆಲೆಯಡ ದಿ. ನಾಣಯ್ಯ ಮತ್ತು ಸರಸ್ವತಿ (ಸರಸು) ದಂಪತಿಯ ದ್ವಿತೀಯ ಪುತ್ರಿಯಾಗಿರುವ ಈಕೆ ಹಲವು ತಿಂಗಳುಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಪ್ರತಿನಿತ್ಯ ಕರ್ತವ್ಯಕ್ಕೆ ತೆರಳುತ್ತಿದ್ದ ದೀಕ್ಷಿತಾ ಗುರುವಾರ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರೆನ್ನಲಾಗಿದ್ದು, ತಾಯಿ, ಅಕ್ಕ ಮತ್ತು ಬಾವ ಸಂಬಂಧಿಕರ ಮದುವೆಗೆಂದು ತೆರಳಿ ಬರುವಷ್ಟರಲ್ಲಿ ಆಕೆಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಾಯಿ ಸರಸ್ವತಿ ಆವರು ನೀಡಿರುವ ದೂರಿನ ಅನ್ವಯ ವೀರಾಜಪೇಟೆ ನಗರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.