ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಬಸ್ಸ್ಟಾಂಡ್ನಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ತಿ. ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಬಳಿ ನಡೆದಿದೆ. ಕಾರಿನಲ್ಲಿ ಯುವತಿಯನ್ನು ಅಪಹರಿಸಿ ನಂತರ ಲಾಡ್ಜ್ಗೆ ಕರೆದೊಯ್ತು ಮೂವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ತಕ್ಷಣ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಮೂವರನ್ನು ಬಂಧಿಸಲಾಗಿದೆ.
ತಿ.ನರಸೀಪುರ ಪಟ್ಟಣದ ಕಿರಣ್ ಅಲಿಯಾಸ್ ಹುಚ್ಚ, ರಿಹಾನ್ಖಾನ್, ಕಿಶೋರ್ ಕುಮಾರ್ ಬಂಧಿತರು. ಇವರನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೆ, ಅಪಹರಣ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ 30 ವರ್ಷದ ಯುವತಿ, ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಭಾನುವಾರ ಕೆಲಸದ ಮೇಲೆ ಮೈಸೂರಿಗೆ ತೆರಳಿದ್ದರು. ನಂತರ ರಾತ್ರಿ ತಿ.ನರಸೀಪುರ ಬಸ್ ಸ್ಟ್ಯಾಂಡ್ಗೆ ಬಂದಾಗ ಈ ಘಟನೆ ನಡೆದಿದೆ.
ಕಾರಿನಲ್ಲಿದ್ದ ಮೂವರು ಅಪರಿಚಿತರು ನನ್ನನ್ನು ಅಪಹರಿಸಿ ಮೂಗೂರಿನಲ್ಲಿದ್ದ ಲಾಡ್ಜ್ಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದಲ್ಲದೇ, ಸಾಮೂಹಿಕ ಅತ್ಯಾಚಾರವೆಸಗಿದರು. ಅಲ್ಲದೇ ನನ್ನ ಮೇಲೆ ಹಲ್ಲೆ ನಡೆಸಿ ನನ್ನ ಬಳಿ ಇದ್ದ ಮೊಬೈಲ್ ಮತ್ತು 5 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ತಿ.ನರಸೀಪುರ ಠಾಣೆಯಲ್ಲಿ ದಾಖಲಾಗಿದೆ.



